ಕೇರಳ ಲಾಟರಿ ಬಹುಮಾನದ ಆಮಿಷವೊಡ್ಡಿ 1.85 ಲಕ್ಷ ರೂಪಾಯಿ ವಂಚಿಸಿದ ವ್ಯಕ್ತಿಯೊಬ್ಬನ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿದೆ. 12 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ ಎಂದು ನಂಬಿಸಿ ಈ ವಂಚನೆ ನಡೆಸಲಾಗಿದೆ.
ಮೇ 29 ರಂದು ಫೇಸ್ಬುಕ್ನಲ್ಲಿ ಲಾಟರಿ ಜಾಹೀರಾತು ನೋಡಿ, ಅದರಲ್ಲಿದ್ದ ಸಂಖ್ಯೆಗೆ ಕರೆ ಮಾಡಿದ್ದ ಸಂತ್ರಸ್ತರಿಗೆ ನವೀನ್ ಎಂಬಾತ ಲಾಟರಿ ನಂಬರ್ ಕಳುಹಿಸಿದ್ದನು. ಕೇವಲ 100 ರೂ. ಹೂಡಿಕೆ ಮಾಡಿ 12 ಲಕ್ಷ ರೂ. ಬಹುಮಾನ ಗೆದ್ದಿರುವುದಾಗಿ ನಂಬಿಸಿದ ವಂಚಕರು, ನಂತರದ ಹಂತಗಳಲ್ಲಿ ದೀಪಕ್ ಮತ್ತು ರಾಜ್ಕುಮಾರ್ ಹೆಸರಿನ ಗೂಗಲ್ ಪೇ ಖಾತೆಗಳಿಗೆ ತೆರಿಗೆ ಮತ್ತು ಇತರೆ ಶುಲ್ಕಗಳ ನೆಪದಲ್ಲಿ ಹಂತ ಹಂತವಾಗಿ ಹಣವನ್ನು ವರ್ಗಾಯಿಸಿಕೊಳ್ಳುತ್ತಾ ಬಂದರು.
ಸಂದೇಹ ಬಂದು ಕಚೇರಿಯ ವಿಳಾಸ ಕೇಳಿದಾಗ ನಕಲಿ ಮ್ಯಾಪ್ ಕಳುಹಿಸಿ ನಂಬಿಸಿದ್ದ ವಂಚಕರು, ಕೊನೆಗೆ ಜೂನ್ 2 ರಂದು ಸಂತ್ರಸ್ತರು ಖುದ್ದಾಗಿ ತಿರುವನಂತಪುರದ ಲಾಟರಿ ಕಚೇರಿಗೆ ತೆರಳಿ ವಿಚಾರಿಸಿದಾಗ, ಅದು ಸಂಪೂರ್ಣ ಸುಳ್ಳು ಮತ್ತು ಫೇಕ್ ಲಾಟರಿ ಎಂಬುದು ತಿಳಿದುಬಂದಿದೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ : ಬೆಳ್ತಂಗಡಿ ಸಮೀಪದ ಗುರುವಾಯನಕೆರೆ ಬಳಿಯ ಅಲಾದಿಕೊಟ್ಟಿಗೆಯಲ್ಲಿ ಪತ್ತೆಯಾಗಿದ್ದ ಅಪರಿಚಿತ ಮೃತದೇಹ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಬಗ್ಗೆ ಮೃತರ ಸಹೋದರ ನಿತಿನ್ (34) ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಸೋಮವಾರ ಬೆಳಿಗ್ಗೆ ವಾಟ್ಸಾಪ್ ಮೂಲಕ ಮೃತದೇಹದ ಭಾವಚಿತ್ರವೊಂದು ಲಭ್ಯವಾಗಿದ್ದು, ಅದನ್ನು ನೋಡಿದ ಕೂಡಲೇ ನಿತಿನ್ ಅವರು ತಮ್ಮ ಸಹೋದರ ಯತೀಶ್ ಎಂದು ಗುರುತಿಸಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿ ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಜೂನ್ 1 ರ ಬೆಳಗಿನ ಜಾವ ಯತೀಶ್ ಅವರ ಮೇಲೆ ಮೂವರು ವ್ಯಕ್ತಿಗಳು ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ. ಈ ಕೃತ್ಯದಲ್ಲಿ ಬೆಳ್ತಂಗಡಿ ಮಿತ್ತಬಾಗಿಲು ನಿವಾಸಿ ಯಶೋಧರ (35), ಕಡಬ ಚಾರ್ವಾಕ ನಿವಾಸಿ ಮೋಹನ್ (30) ಹಾಗೂ ಬೆಳ್ತಂಗಡಿ ಪದಂಗಡಿಯ ಇಬ್ರಾಹಿಂ (54) ಭಾಗಿಯಾಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರಿನ ಆಧಾರದ ಮೇಲೆ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಗಳ ಹಲ್ಲೆಯಿಂದಲೇ ಯತೀಶ್ ಮೃತಪಟ್ಟಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 65/2026 ರ ಅಡಿ ಪ್ರಕರಣ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS) ಕಲಂ 115(2), 103 ಹಾಗೂ 3(5) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.