ವರ್ಷದಲ್ಲಿ 27 ದಿನ ತೆರೆದಿರುವ ದೇಗುಲ, ಅರಣ್ಯದ ನಡುವೆ ಪುಣ್ಯಕ್ಷೇತ್ರ

ನದಿಯ ದಡದಲ್ಲಿ, ದಟ್ಟ ಅರಣ್ಯದ ನಡುವೆ ಇರುವ ಪುಣ್ಯಕ್ಷೇತ್ರ. ವರ್ಷದಲ್ಲಿ ಕೇವಲ 27 ದಿನಗಳ ಕಾಲ ಮಾತ್ರ ದರ್ಶನ ಪಡೆಯಲು ಸಾಧ್ಯವಿರುವ ಈ ಪುಣ್ಯಕ್ಷೇತ್ರವೇ ಕೇರಳದ ಕೊಟ್ಟಿಯೂರು ಶಿವಕ್ಷೇತ್ರ. ಇದೀಗ ಇಲ್ಲಿಗೆ ಭಕ್ತರ ದಂಡೇ ಹರಿದು ಬರುತ್ತಿದೆ. ಈ ತಾಣದ ಬಗ್ಗೆ ತಿಳಿದರೆ ಅಚ್ಚರಿಯಾಗುತ್ತದೆ.
ಈ ಕ್ಷೇತ್ರವು ‘ಇಕ್ಕರೆ’ ಮತ್ತು ‘ಅಕ್ಕರೆ’ ಎನ್ನುವ 2 ಭಾಗಗಳನ್ನು ಹೊಂದಿದೆ. ಇಕ್ಕರೆ ಕೊಟ್ಟಿಯೂರು ಯಾವಾಗಲೂ ತೆರೆದಿರುತ್ತದೆ. ಆದರೆ ಅಕ್ಕರೆ ಕೊಟ್ಟಿಯೂರು ಹಳೆಯ ಕಾಲದ ಸಂಪ್ರದಾಯದಂತೆ ತೆಂಗಿನ ಗರಿಗಳಿಂದ ಮಾಡಿದ ಜೋಪಡಿಯಾಗಿದೆ. ವೈಶಾಖ ಮಾಸದ ಆ ನಿರ್ದಿಷ್ಟ 27 ದಿನಗಳನ್ನು ಬಿಟ್ಟು, ಉಳಿದ ದಿನಗಳಲ್ಲಿ ಪ್ರವೇಶವೇ ಇಲ್ಲ. ಅರಣ್ಯದೊಳಗೂ ಮನುಷ್ಯರ ಪ್ರವೇಶವನ್ನು ನಿಶೇಧಿಸಲಾಗುತ್ತದೆ.
ಸತಿ ದೇವಿಯ ಕಥೆ ಮತ್ತು ನಿಗೂಢ ಕಲ್ಲುಗಳು
ಪುರಾಣಗಳ ಪ್ರಕಾರ, ಸತಿ ದೇವಿ ಅಗ್ನಿಕುಂಡಕ್ಕೆ ಹಾರಿ ದೇಹತ್ಯಾಗ ಮಾಡಿದ ಸ್ಥಳವಿದು ಎನ್ನಲಾಗುತ್ತದೆ. ಇಲ್ಲಿ ಸತಿ ದೇವಿ ಕುಳಿತಿದ್ದ ಪೀಠದಂತಹ ಗುರುತು ಇಂದಿಗೂ ಇದೆ. ಈ ಕ್ಷೇತ್ರದ ಮತ್ತೊಂದು ವಿಶೇಷವೆಂದರೆ ಇಲ್ಲಿನ ನದಿಯಲ್ಲಿ ಸಿಗುವ ವಿಶಿಷ್ಟ ಕಲ್ಲುಗಳು. ಆಶ್ಚರ್ಯವೇನೆಂದರೆ, ಈ ಕಲ್ಲುಗಳನ್ನು ಉಜ್ಜಿದರೆ ಶ್ರೀಗಂಧದ ಪರಿಮಳ ಬರುತ್ತದೆ. ಭಕ್ತರು ಈ ಕಲ್ಲುಗಳನ್ನೇ ದೇವರ ರೂಪದಲ್ಲಿ ಪೂಜಿಸುತ್ತಾರೆ.
ಶ್ರೀಮಂತಿಕೆಯಲ್ಲಿ ಕೇರಳದ ಎರಡನೇ ದೇಗುಲ
ಈ ಕ್ಷೇತ್ರವು ಅಪಾರ ಚಿನ್ನ ಮತ್ತು ಬೆಲೆಬಾಳುವ ಕಲ್ಲುಗಳ ಸಂಗ್ರಹವನ್ನು ಹೊಂದಿದೆ. ಇವುಗಳ ಕಾರಣದಿಂದಲೇ ಇದು ಕೇರಳದ ಎರಡನೇ ಅತೀ ಶ್ರೀಮಂತ ದೇಗುಲ ಎಂಬ ಖ್ಯಾತಿ ಪಡೆದಿದೆ. ಇಲ್ಲಿನ ಆನೆ ಮೇಲಿನ ಮೆರವಣಿಗೆಯಂತೂ ಭಕ್ತರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.





