​ಮಂಜನಾಡಿ ಗುಡ್ಡ ಕುಸಿತದ ಸಂತ್ರಸ್ತೆ ಶ್ರೀಮತಿ ಅಶ್ವಿನಿ ಮನೆಗೆ ಶಾಸಕ ಕಿಶೋರ್ ಕುಮಾರ್ ಭೇಟಿ: ಬದುಕಿಗೆ ಭರವಸೆಯ ಆಸರೆ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ 12 ವರ್ಷಗಳ ‘ವಿಶ್ವಾಸ, ವಿಕಾಸ ಮತ್ತು ಜನ ಕಲ್ಯಾಣ’ದ ಪ್ರಯುಕ್ತ
ಮಂಗಳೂರು ಮಂಡಲದ ವಿಶೇಷ ಪ್ರವಾಸದಲ್ಲಿ ಇದ್ದ ವಿಧಾನ ಪರಿಷತ್ ಶಾಸಕರಾದ ಕಿಶೋರ್ ಕುಮಾರ್ ಪುತ್ತೂರುರವರು ಕಳೆದ ವರ್ಷ ಮಂಗಳೂರು ಉಳ್ಳಾಲ ಸಮೀಪದ ಮಂಜನಾಡಿಯಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತದಲ್ಲಿ ತನ್ನ ಇಡೀ ಪ್ರಪಂಚವನ್ನೇ ಕಳೆದುಕೊಂಡು, ಅತೀವ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ನೊಂದ ಮಹಿಳೆ ಶ್ರೀಮತಿ ಅಶ್ವಿನಿ ಅವರು ಮನೆಗೆ ಇಂದು ಖುದ್ದಾಗಿ ಭೇಟಿ ನೀಡಿ ಸಾಂತ್ವನ ಹೇಳಿದರು. ಕರುಳು ಹಿಂಡುವ ಈ ದುರಂತದ ಬಳಿಕ ಚಿಂತಾ ಜನಕ ಪರಿಸ್ಥಿತಿಯಲ್ಲಿರುವ ಕುಟುಂಬಕ್ಕೆ ವೈಯಕ್ತಿಕವಾಗಿ ಹಾಗೂ ಸರ್ಕಾರದ ಮಟ್ಟದಲ್ಲಿ ಸಂಪೂರ್ಣ ಬೆಂಬಲವಾಗಿ ನಿಲ್ಲುವ ಭರವಸೆಯನ್ನು ಶಾಸಕರು ತುಂಬಿದರು.
ಕಳೆದ ವರ್ಷ ಸುರಿದ ಭಾರಿ ಮಳೆಯಿಂದಾಗಿ ಮಂಜನಾಡಿಯಲ್ಲಿ ಸಂಭವಿಸಿದ ಗುಡ್ಡ ಕುಸಿತವು ಅಶ್ವಿನಿ ಅವರ ಬದುಕನ್ನೇ ನುಚ್ಚುನೂರು ಮಾಡಿತು. ಈ ಭೀಕರ ದುರಂತದಲ್ಲಿ ಅಶ್ವಿನಿ ಅವರು ತಮ್ಮಿಬ್ಬರು ಮುದ್ದಾದ ಮಕ್ಕಳು ಹಾಗೂ ಅತ್ತೆಯನ್ನು ಕಳೆದುಕೊಂಡಿದ್ದರು. ಕೇವಲ ಪ್ರಾಣ ಹಾನಿಯಷ್ಟೇ ಅಲ್ಲದೆ, ಪ್ರಕೃತಿಯ ವಿಕೋಪಕ್ಕೆ ಅಶ್ವಿನಿಯವರು ತಮ್ಮ ಎರಡು ಕಾಲುಗಳನ್ನು ಕಳೆದುಕೊಂಡರೆ ಅವರ ಮಾಬ ಒಂದು ಕಾಲನ್ನು ಕಳೆದುಕೊಂಡು ಶಾಶ್ವತ ಅಂಗವಿಕಲಕ್ಕೆ ತುತ್ತಾಗಿದ್ದಾರೆ. ಕಣ್ಣ ಮುಂದೆಯೇ ಇಡೀ ಕುಟುಂಬ ಹಾಗೂ ಕಟ್ಟಿದ ಮನೆ ಮಣ್ಣು ಪಾಲಾಗಿ ಇಂದು ಎರಡು ಕಾಲುಗಳಿಲ್ಲದೆ ದೈನಂದಿನ ಜೀವನ ನಡೆಸಲು ಪರದಾಡುತ್ತಿರುವ ಅಶ್ವಿನಿ ಅವರ ಪರಿಸ್ಥಿತಿ ಕಂಡು ಶಾಸಕ ಕಿಶೋರ್ ಕುಮಾರ್ ಅವರು ತೀವ್ರ ಭಾವುಕರಾದರು.


ಅಶ್ವಿನಿ ಅವರ ಕಣ್ಣೀರು ಒರೆಸಿ ದೈರ್ಯ ತುಂಬಿದ ಶಾಸಕರು ನೀವು ಒಂಟಿಯಲ್ಲ ಈ ಕಷ್ಟದ ಸಮಯದಲ್ಲಿ ನಿಮ್ಮ ಕುಟುಂಬದ ಜೊತೆಗೆ ನಾವಿದ್ದೇವೆ ನೀವು ಕಳೆದುಕೊಂಡಿರುವ ಜೀವಗಳನ್ನು ಮರಳಿ ತರಲು ಸಾಧ್ಯವಿಲ್ಲ ಆದರೆ ನಿಮ್ಮ ಮುಂದಿನ ಬದುಕಿಗೆ ಆಸರೆಯಾಗಿ ನಿಲ್ಲುವ ಜವಾಬ್ದಾರಿ ನಮ್ಮದಾಗಿದೆ ನಿಮ್ಮ ಬದುಕನ್ನು ಕಟ್ಟಿಕೊಳ್ಳಲು ಹಾಗೂ ಸರ್ಕಾರದಿಂದ ನಿಮಗೆ ಸಿಗಬೇಕಾದ ಹಕ್ಕು ಸೂಕ್ತ ಪರಿಹಾರ ಮತ್ತು ಪುನರ್ವಸತಿಗಾಗಿ ನಡೆಯುವ ಪ್ರತಿಯೊಂದು ಹೋರಾಟದಲ್ಲೂ ನಾನು ನಿಮ್ಮ ಜೊತೆಗೆ ನಿಲ್ಲುತ್ತೇನೆ ಎಂದು ಆಶ್ವಾಸನೆ ನೀಡಿದರು. ಇದೇ ಸಂದರ್ಭದಲ್ಲಿ ಅಶ್ವಿನಿಯವರ ವೈದ್ಯಕೀಯ ವೆಚ್ಚಗಳು ಹಾಗೂ ಪ್ರಸ್ತುತ ಜೀವನ ನಿರ್ವಹಣೆಯ ಕುರಿತು ಮಾಹಿತಿ ಪಡೆದುಕೊಂಡ ಶಾಸಕರು ಜಿಲ್ಲಾಡಳಿತದಿಂದ ಹಾಗೂ ಸರ್ಕಾರದ ಮಟ್ಟದಿಂದ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ತುರ್ತಾಗಿ ಒದಗಿಸಿಕೊಡಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ರಕ್ಷಣಾ ವೇ ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು
ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೆತ್ತಬೈಲ್, ಜಿಲ್ಲೆಯ ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಮಂಡಲ ಪ್ರಧಾನಕಾರ್ಯದರ್ಶಿಗಳಾದ ಮೋಹನ್ ರಾಜ್ ಕೆ ಆರ್, ದಯಾನಂದ ತೊಕ್ಕೊಟ್ಟು, ಉಪಾಧ್ಯಕ್ಷರಾದ ಸುಮನ ಹರೀಶ್ ಶೆಟ್ಟಿ, ಯುವ ಮೋರ್ಚಾ ಅಧ್ಯಕ್ಷರಾದ ಮುರಳಿಧರ ಕೊಣಾಜೆ, ರೈತ ಮೋರ್ಚ ಅಧ್ಯಕ್ಷರಾದ ಪದ್ಮನಾಭ ಗಟ್ಟಿ, ಮಂಡಲದ ಕೋಶಾಧಿಕಾರಿ ಸುಮಲತಾ ಕೊಣಾಜೆ, ಶಕ್ತಿಕೇಂದ್ರ ಪ್ರಮುಖ ಸುಧಾಕರಗಟ್ಟಿ ಮತ್ತಿತರರು ಉಪಸ್ಥಿತರಿದ್ದರು