ಬಿಜೆಪಿ ಕುಂಬಳೆ ಪಂಚಾಯತ್ ನ ನೂತನ ಕಟ್ಟಡ ಎಂ.ಎಲ್ ಅಶ್ವಿನಿಯವರಿಂದ ಉದ್ಘಾಟನೆ

ಕುಂಬಳೆಯಲ್ಲಿ ನಡೆದ ಬಿಜೆಪಿ ಪಂಚಾಯತ್ ಸಮಿತಿಯ ನೂತನ ಕಚೇರಿ ಉದ್ಘಾಟನಾ ಸಮಾರಂಭವನ್ನು ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಅವರು ನೆರವೇರಿಸಿದರು. ಕಾರ್ಯಕ್ರಮದ ಉದ್ಘಾಟನೆಗೂ ಮುನ್ನ, ಬಿಜೆಪಿ ರಾಜ್ಯ ಸಮಿತಿ ಸದಸ್ಯ ಮತ್ತು ಹಿರಿಯ ನಾಯಕರಾದ ವಿ. ರವೀಂದ್ರನ್ ಅವರು ಧ್ವಜಾರೋಹಣ ನೆರವೇರಿಸಿದರು. ಕುಂಬಳೆ ಪಂಚಾಯತ್ ದಕ್ಷಿಣ ಕ್ಷೇತ್ರ ಸಮಿತಿಯ ಅಧ್ಯಕ್ಷ ಸುಜಿತ್ ರೈ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

​ಈ ಸಂದರ್ಭದಲ್ಲಿ ಜನಸಂಘ ಮತ್ತು ಬಿಜೆಪಿಯ ಹಿರಿಯ ಹಾಗೂ ಆರಂಭಿಕ ಕಾರ್ಯಕರ್ತರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸತೀಶ್ ಚಂದ್ರ ಭಂಡಾರಿ (ರಾಜ್ಯ ಸಮಿತಿ ಸದಸ್ಯ), ಸುಬ್ಬಯ್ಯ ರೈ (ತುರ್ತು ಹೋರಾಟಗಾರ ಮತ್ತು ಜನಸಂಘದ ಕಾರ್ಯಕರ್ತ), ಮುರಲೀಧರ ಯಾದವ್ (ಜಿಲ್ಲಾ ಉಪಾಧ್ಯಕ್ಷ), ವಸಂತಮಯ್ಯ (ಮಂಡಲ ಪ್ರಧಾನ ಕಾರ್ಯದರ್ಶಿ), ವಿಕ್ರಮ್ ಪೈ ಹಾಗೂ ಪ್ರೇಮಾವತಿ (ಮಂಡಲ ಉಪಾಧ್ಯಕ್ಷರು), ಶಿವಪ್ರಸಾದ್ ರೈ (ಕುಂಬಳೆ ಪಂಚಾಯತ್ ಉತ್ತರ ಕ್ಷೇತ್ರ ಸಮಿತಿ ಅಧ್ಯಕ್ಷ) ಸೇರಿದಂತೆ ಪಂಚಾಯತ್ ಪ್ರತಿನಿಧಿಗಳು, ವಿನೋದ್ ಕೊಯಿಪ್ಪಾಡಿ ಕಡಪರ ಮತ್ತು ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ಪುತ್ತೂರು : ಸಂಸದ ಕ್ಯಾ. ಬ್ರಿಜೇಶ್ ಚೌಟರಿಂದ ರೈಲ್ವೆ ನಿಲ್ದಾಣ ಅಭಿವೃದ್ಧಿ ಯೋಜನೆಗೆ ಚಾಲನೆ

ಪುತ್ತೂರು ರೈಲ್ವೆ ನಿಲ್ದಾಣ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಲಿರುವ ಸಂಸದ ಕ್ಯಾ. ಬ್ರಿಜೇಶ್ ಚೌಟ ರವರು ಜೂನ್ 18, ಗುರುವಾರ ಬೆಳಗ್ಗೆ 9.30 ಕ್ಕೆ ಕಬಕ ನಿಲ್ದಾಣಕ್ಕೆ ಭೇಟಿ ನೀಡುವರು.

ಅವರು ಪುತ್ತೂರು ಕ್ಷೇತ್ರದ ಹಲವು ಕಾಮಗಾರಿಗಳ ವೀಕ್ಷಣೆ ಮಾಡಲಿರುವರು. ಜೊತೆಗೆ ರೈಲ್ವೆ ಕಾಮಗಾರಿ ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ.

ಸುಮಾರು 4.5 ಕೋತಿ ವೆಚ್ಚದಲ್ಲಿ ಅನುಷ್ಠಾನಗೊಳ್ಳುತ್ತಿರುವ ರೈಲ್ವೆ ನಿಲ್ದಾಣದ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡಲಿದ್ದಾರೆ. ಕ್ಷೇತ್ರದ ಬೇರೆ ಬೇರೆ ಕಡೆ ಸಂಸದರ ನಿಧಿಯ ಕಾಮಗಾರಿಗಳಿಗೆ ಶೀಲಾನ್ಯಾಸಗಯ್ಯಲಿದ್ದಾರೆ.

ಕರ್ನಾಟಕ ಸರಕಾರದಿಂದ ಮೃತ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ಜಮೆ

ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ, ಮೃತಪಟ್ಟ 68,776 ಮಹಿಳೆಯರ ಖಾತೆಗಳಿಗೆ ಹಣ ಜಮೆಯಾಗಿರುವುದು ಪತ್ತೆಯಾಗಿದೆ.ಈ ರೀತಿಯಾಗಿ ಸುಮಾರು 79,75,66,000 ರೂಪಾಯಿಗಳಷ್ಟು ಸರ್ಕಾರಿ ಹಣ ಪೋಲಾಗಿರುವುದು ಬೆಳಕಿಗೆ ಬಂದಿದೆ.

ರಾಜ್ಯದಲ್ಲಿ 1.24 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿದ್ದಾರೆ. ಹಣದ ದುರುಪಯೋಗವನ್ನು ತಡೆಯಲು ಸರ್ಕಾರ ಯೋಜನೆಯನ್ನು ಪರಿಷ್ಕರಿಸಲು ಮುಂದಾಗಿದೆ. ಮೃತಪಟ್ಟವರ ಹೆಸರಿನಲ್ಲಿ ಹಣ ಪಡೆದವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಮತ್ತು ಹಂತ ಹಂತವಾಗಿ ಹಣವನ್ನು ವಾಪಸ್ ಪಡೆಯಲಾಗುತ್ತಿದೆ. ಒಟ್ಟು 92 ಬ್ಯಾಂಕ್ ಖಾತೆಗಳಿಗೆ ಮಹಿಳೆಯ ಮರಣದ ನಂತರವೂ ಹಣ ಪಾವತಿಯಾಗಿದೆ.

ಮೃತಪಟ್ಟ ಮಹಿಳೆಯರ ಖಾತೆಗೆ ಜಮೆಯಾದ ಹಣವನ್ನು ವಾಪಸ್ ಪಡೆಯುವ ಕುರಿತು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮತ್ತು ಬ್ಯಾಂಕ್ ಆಡಳಿತ ಮಂಡಳಿಯವರು ಸಭೆ ನಡೆಸಿದ್ದಾರೆ.

ವಾಣಿಜ್ಯ ಹಡಗಿನ ಮೇಲಿನ ದಾಳಿಯಲ್ಲಿ ಭಾರತೀಯರ ಸಾವು: ಅಮೆರಿಕಾಗೆ ಭಾರತದ ತೀವ್ರ ಆಕ್ಷೇಪ, ಉಲ್ಬಣಿಸಿದ ರಾಜತಾಂತ್ರಿಕ ಜಟಾಪಟಿ.

ಗಲ್ಫ್ ಆಫ್ ಒಮಾನ್ ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ನೌಕಾಪಡೆ ವಾಣಿಜ್ಯ ಹಡಗುಗಳ ಮೇಲೆ ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟಿದ್ದಾರೆ. ‘ಸೆಟ್ಟೆಬೆಲ್ಲೊ’ ತೈಲ ಟ್ಯಾಂಕರ್ ಮೇಲಿನ ದಾಳಿ ಈ ದುರಂತಕ್ಕೆ ಕಾರಣವಾಗಿದ್ದು, ಭಾರತೀಯ ಸಿಬ್ಬಂದಿ ಇದ್ದ ಇತರೆ ಹಡಗುಗಳನ್ನೂ ಅಮೆರಿಕ ತಡೆದಿದೆ.

ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರೊಂದಿಗೆ ಮಾತುಕತೆ ನಡೆಸಿ, ವಾಣಿಜ್ಯ ಹಡಗುಗಳ ಮೇಲೆ ಮಾರಕ ಶಕ್ತಿ ಬಳಸಿರುವುದನ್ನು ಬಲವಾಗಿ ಖಂಡಿಸಿದ್ದಾರೆ. ಭಾರತೀಯರ ಜೀವಹಾನಿಗೆ ಕಾರಣವಾದ ಇಂತಹ ಕ್ರಮಗಳು ಸ್ವೀಕಾರಾರ್ಹವಲ್ಲ ಮತ್ತು ಅಂತಾರಾಷ್ಟ್ರೀಯ ಕಾನೂನುಗಳಿಗೆ ವಿರುದ್ಧವಾಗಿದೆ ಎಂದು ಭಾರತ ಸ್ಪಷ್ಟಪಡಿಸಿದೆ. ಅಲ್ಲದೆ, ನವದೆಹಲಿಯಲ್ಲಿ ಅಮೆರಿಕದ ಚಾರ್ಜ್ ಡಿ ಅಫೈರ್ಸ್ ಅವರನ್ನು ಕರೆಸಿಕೊಂಡು ತೀವ್ರ ಪ್ರತಿಭಟನೆ ದಾಖಲಿಸಲಾಗಿದೆ.

ಅಮೆರಿಕವು ತನ್ನ ಭದ್ರತಾ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದು, ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ಆದೇಶಗಳನ್ನು ಎಲ್ಲ ವಾಣಿಜ್ಯ ಹಡಗುಗಳು ಪಾಲಿಸುವುದು ಕಡ್ಡಾಯ ಎಂದು ತಿಳಿಸಿದೆ. ಇರಾನ್ ತೈಲ ಸಾಗಣೆಯ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ ಎಂದು ಅಮೆರಿಕ ಎಚ್ಚರಿಕೆ ನೀಡಿದೆಈ ಘಟನೆಯು ಅಮೆರಿಕ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಸಂಬಂಧದಲ್ಲಿ ಬಿರುಕು ಮೂಡಿಸಿದ್ದು, ಗಲ್ಫ್ ಪ್ರದೇಶದಲ್ಲಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಭಾರತ ತನ್ನ ಪ್ರಜೆಗಳ ಸುರಕ್ಷತೆಗಾಗಿ ದೃಢ ನಿಲುವು ತಳೆದಿದ್ದು, ಮುಂದಿನ ದಿನಗಳಲ್ಲಿ ಉನ್ನತ ಮಟ್ಟದ ರಾಜತಾಂತ್ರಿಕ ಮಾತುಕತೆಗಳು ನಿರ್ಣಾಯಕವಾಗಿವೆ.

ಕೇರಳ ಮುಖ್ಯಮಂತ್ರಿ ವಿ. ಡಿ ಸತೀಶನ್ ಅವರ ಕುಟುಂಬಕ್ಕೆ ಕೊಲೆ ಬೆದರಿಕೆ – ಕುಡಿದ ಮತ್ತಿನಲ್ಲಿ ಕೃತ್ಯ

ಕೇರಳದ ಮುಖ್ಯಮಂತ್ರಿ ವಿ.ಡಿ. ಸತೀಶನ್ ಮತ್ತು ಅವರ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಅಟ್ಟಿಂಗಲ್ ನಿವಾಸಿ ಸೋನಿ ಥಾಮಸ್ ಎಂದು ಗುರುತಿಸಲಾಗಿದೆ.

ಶುಕ್ರವಾರ ಸಂಜೆ ಅಜ್ಞಾತ ವ್ಯಕ್ತಿಯೊಬ್ಬ ತಿರುವನಂತಪುರದ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ಬೆದರಿಕೆ ಹಾಕಿದ್ದನು. ತನಗೆ ಸತೀಶನ್ ಇಷ್ಟವಿಲ್ಲ ಎಂಬ ಕಾರಣವನ್ನು ಆರೋಪಿ ನೀಡಿದ್ದನು.

ಪೊಲೀಸರು ಫೋನ್ ಸಿಗ್ನಲ್ ಟ್ರ್ಯಾಕ್ ಮಾಡುವ ಮೂಲಕ ಆರೋಪಿಯನ್ನು ಶನಿವಾರ ಬೆಳಿಗ್ಗೆ ಬಂಧಿಸಿದ್ದಾರೆ. ಆರೋಪಿಯು ಕರೆ ಮಾಡಿದ ಸಮಯದಲ್ಲಿ ಮದ್ಯದ ಅಮಲಿನಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಪ್ರಕ್ರಿಯೆ ನಡೆಯಲಿದೆ.

ಪಶ್ಚಿಮ ಬಂಗಾಳ : ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ನನ್ನಷ್ಟು ಕೆಟ್ಟ ವ್ಯಕ್ತಿ ಯಾರೂ ಇರಲ್ಲ – ಸಿ. ಎಂ. ಸುವೇಂದು ಅಧಿಕಾರಿ ಖಡಕ್ ವಾರ್ನಿಂಗ್

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ವಿಷಯದಲ್ಲಿ ಕಠಿಣ ನಿಲುವು ಪ್ರದರ್ಶಿಸಿದ್ದಾರೆ. ಹಿಂಸಾಚಾರ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಧ್ವಂಸ ಮಾಡುವ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿರುವ ಅವರು, ಇಂತಹ ಘಟನೆಗಳು ಮರುಕಳಿಸಿದರೆ ತಾನು ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಗುಡುಗಿದ್ದಾರೆ.

​ರಾಜ್ಯದಲ್ಲಿ ಗೂಂಡಾಗಿರಿ ಮತ್ತು ಸಮಾಜವಿರೋಧಿ ಕೃತ್ಯಗಳಿಗೆ ಯಾವುದೇ ಅವಕಾಶ ನೀಡುವುದಿಲ್ಲ. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಶೂನ್ಯ ಸಹನೆ (Zero Tolerance) ನೀತಿಯನ್ನು ಅನುಸರಿಸಲಾಗುವುದು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿರುವುದರಿಂದ ಆಡಳಿತದಲ್ಲಿ ಉತ್ತಮ ಸಮನ್ವಯತೆ ಮೂಡಿದೆ. ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ರಾಜ್ಯದ ಅಭಿವೃದ್ಧಿ ಕಾರ್ಯಗಳು ವೇಗವಾಗಿ ಸಾಗುತ್ತಿವೆ.

ಪಾರ್ಕ್ ಸರ್ಕಸ್ ಮತ್ತು ಅಸನ್ಸೋಲ್‌ನಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಸರ್ಕಾರ ಯಶಸ್ವಿಯಾಗಿ ನಿಭಾಯಿಸಿದೆ.ಗಡಿ ಭದ್ರತೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಸಿಲಿಗುರಿ ಕಾರಿಡಾರ್ (ಚಿಕನ್ಸ್ ನೆಕ್) ಸೇರಿದಂತೆ ಗಡಿ ಭಾಗಗಳಲ್ಲಿ ಬಿಎಸ್‌ಎಫ್‌ಗೆ ಭೂಮಿ ಹಸ್ತಾಂತರ ಮತ್ತು ಬೇಲಿ ನಿರ್ಮಾಣ ಕಾರ್ಯಗಳು ಭರದಿಂದ ಸಾಗಿವೆ ಎಂದು ಸಿಎಂ ತಿಳಿಸಿದ್ದಾರೆ.

​ಒಟ್ಟಾರೆಯಾಗಿ, ರಾಜ್ಯದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಖಚಿತಪಡಿಸುವುದು ತಮ್ಮ ಸರ್ಕಾರದ ಮೊದಲ ಆದ್ಯತೆ ಎಂದು ಸುವೇಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಸರಕಾರದ ಗ್ಯಾರಂಟಿ ಯೋಜನೆಗಳು ಪರಿಷ್ಕರಣೆಯಿಂದ ರದ್ದಾಗಲಿವೆ. – ಮಾಜಿ ಸಚಿವ ಬಿ. ಶ್ರೀರಾಮುಲು

ರಾಜ್ಯ ಬಿಜೆಪಿ ಕಾರ್ಯಲಯ, ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾಜಿ ಸಚಿವ ಬಿ ಶ್ರೀರಾಮುಲು ಸಭೆ ನಡೆಸಿದರು. ಗ್ಯಾರಂಟಿ ಯೋಜನೆಗಳೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರದ ಬಗ್ಗೆ ಅಸಮಾಧಾನ ಹೊರಹಾಕಿ ಮಾತನಾಡುತ್ತಿದ್ದರು.

ರಾಜ್ಯ ಸರ್ಕಾರ ಅಧಿಕಾರಕ್ಕೆ ಬರಲು ಸುಳ್ಳು ಭರವಸೆ ನೀಡಿ ಗ್ಯಾರಂಟಿಗಳನ್ನು ಘೋಷಿಸಿತ್ತು. ಈಗ ಅವುಗಳನ್ನು ಪರಿಷ್ಕರಣೆ ಅಥವಾ ಸ್ಥಗಿತಗೊಳಿಸುವ ಹುನ್ನಾರ ನಡೆಸುತ್ತಿದೆ. ಜನರು ಕೇಳದಿದ್ದರೂ ರಾಜಕೀಯ ಸ್ವಾರ್ಥಕ್ಕಾಗಿ ಈ ಯೋಜನೆಗಳನ್ನು ಜಾರಿಗೊಳಿಸಿ, ಇದೀಗ ಅವ್ಯವಸ್ಥೆಯಿಂದಾಗಿ ಅವುಗಳನ್ನು ನಿಲ್ಲಿಸಲು ಮುಂದಾಗಿದೆ. ಸರ್ಕಾರ ಕೂಡಲೇ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಗೃಹಲಕ್ಷ್ಮಿ ಯೋಜನೆಯ ಹಣ ಮೃತ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗುತ್ತಿರುವುದು ಸೇರಿದಂತೆ ಹಲವು ಲೋಪಗಳು ನಡೆದಿವೆ. ಈ ಯೋಜನೆಯಲ್ಲಿ ಅಕ್ರಮಗಳು ನಡೆಯುತ್ತಿರುವುದನ್ನು ಸರ್ಕಾರವೇ ಸದನದಲ್ಲಿ ಒಪ್ಪಿಕೊಂಡಿದೆ ಎಂದು ದೂರಿದರು.

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ನಡುವೆ ಶೀತಲ ಸಮರ ನಡೆಯುತ್ತಿತ್ತು. ಈಗ ಶಿವಕುಮಾರ್ ಅವರು ಸಿಎಂ ಆದ ನಂತರ ಸಚಿವ ಸಂಪುಟಕ್ಕಾಗಿ ಕಚ್ಚಾಟ ಆರಂಭವಾಯಿತು. ಸರ್ಕಾರವು ರಾಹುಲ್ ಗಾಂಧಿ ಅವರ ಮೇಲೆಯೇ ನಿಂತಿದ್ದು, ಸಚಿವರ ನಡುವೆ ಖಾತೆಗಳ ಹಂಚಿಕೆಯ ವಿಷಯದಲ್ಲಿ ಭಿನ್ನಾಭಿಪ್ರಾಯ ಮತ್ತು ಕಚ್ಚಾಟಗಳು ಹೆಚ್ಚಾಗಿವೆ ಎಂದು ಆರೋಪಿಸಿದರು.

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಷಡ್ಯಂತ್ರ ಮತ್ತು ಹಿಂದೂ ಧಾರ್ಮಿಕ ಸ್ಥಳಗಳಿಗೆ ತೊಂದರೆ ನೀಡುವ ಪ್ರಯತ್ನದ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಸಮರ್ಪಣಾ ಯಾತ್ರೆಯ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಕಚ್ಚಿದ ಸೇಬನ್ನು ಜನರಿಗೆ ಎಸೆದಿದ್ದನ್ನು ಪ್ರಸ್ತಾಪಿಸಿ, ಇದು ಜನರಿಗೆ ಅಗೌರವ ತೋರುವಂತಹ ಕೃತ್ಯ ಎಂದು ಟೀಕಿಸಿದರು.

​ಒಟ್ಟಾರೆಯಾಗಿ, ರಾಜ್ಯ ಸರ್ಕಾರವು ಗ್ಯಾರಂಟಿಗಳನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಮತ್ತು ಸರ್ಕಾರದ ಆಂತರಿಕ ಕಲಹದಿಂದಾಗಿ ರಾಜ್ಯದ ಆಡಳಿತ ಹದಗೆಟ್ಟಿದೆ ಎಂದು ಶ್ರೀರಾಮುಲು ಅವರು ಟೀಕಿಸಿದ್ದಾರೆ.

ಇಂದು ಕರ್ನಾಟಕಕ್ಕೆ ಭೇಟಿ ನೀಡಲಿರುವ ತಮಿಳುನಾಡಿನ ಮುಖ್ಯಮಂತ್ರಿ : ಕೊಲ್ಲೂರಿನಲ್ಲಿ ಬಿಗಿ ಭದ್ರತೆ

ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಅವರಿಗೆ ಪ್ರತಿಭಟನೆಯ ಬಿಸಿ ಎದುರಾಗಿದ್ದು, ದೇವಸ್ಥಾನದ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ಪ್ರಕಾರ, ಜಿಲ್ಲಾ ಪೊಲೀಸರು ಸಂಪೂರ್ಣ ಬಂದೋಬಸ್ತ್ ಒದಗಿಸಿದ್ದಾರೆ. ತಮಿಳುನಾಡಿನ ಡಿಐಜಿ ಮತ್ತು ಎಸ್ಪಿ ಸೇರಿದಂತೆ ಸುಮಾರು 40 ಮಂದಿ ಸಿಎಂ ಅವರ ಭದ್ರತಾ ತಂಡದಲ್ಲಿದ್ದಾರೆ.ಸಿಎಂ ಅವರಿಗೆ ‘ಝಡ್ ಪ್ಲಸ್’ ಭದ್ರತೆ ಇರುವುದರಿಂದ ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದ್ದು, ಪೂರ್ವಭ್ಯಾಸವನ್ನೂ ನಡೆಸಲಾಗಿದೆ.

ಸಿಎಂ ಯಾವುದೇ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುತ್ತಿಲ್ಲ, ಆದರೂ ಅವರು ಸಂಚರಿಸುವ ಮಾರ್ಗ ಹಾಗೂ ದೇವಸ್ಥಾನದ ಸುತ್ತಮುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಭಕ್ತರಿಗೆ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧವಿಲ್ಲ, ಆದರೆ ಸಿಎಂ ಭೇಟಿಯ ಕಾರಣದಿಂದ ದರ್ಶನಕ್ಕೆ ಸ್ವಲ್ಪ ಅನಾನುಕೂಲವಾಗಬಹುದು. ವಿವಿಐಪಿ ವಾಹನ ಸಂಚಾರದ ಹಾದಿಯಲ್ಲಿ ಅಥವಾ ದೇವಸ್ಥಾನದ ಆವರಣದಲ್ಲಿ ಜನರು ಗುಂಪು ಸೇರದಂತೆ ಸೂಚಿಸಲಾಗಿದೆ.

12 ವರ್ಷಗಳ ಸುದೀರ್ಘ ಸೇವೆ, ನನ್ನ ಸೌಭಾಗ್ಯ – ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ನೇತೃತ್ವದ ಎನ್‌ಡಿಎ (NDA) ಸರ್ಕಾರವು 12 ವರ್ಷಗಳನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ, ಭಾರತ್ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಇಷ್ಟು ದೀರ್ಘಕಾಲ ದೇಶಕ್ಕೆ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ತಮ್ಮ ಸೌಭಾಗ್ಯ ಮತ್ತು ದೇವರ ಆಶೀರ್ವಾದ ಎಂದು ನಮ್ರತೆಯಿಂದ ವ್ಯಕ್ತಪಡಿಸಿದ್ದಾರೆ. ಈ ಸೇವೆ ಒಂದು “ಸಾಮೂಹಿಕ ಯಜ್ಞ” ಎಂದು ಕರೆದು, ಅದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ಈ 12 ವರ್ಷಗಳ ಸುದೀರ್ಘ ಆಡಳಿತವನ್ನು ಕೇವಲ ತಮ್ಮ ವೈಯಕ್ತಿಕ ಸಾಧನೆ ಎಂದು ಪರಿಗಣಿಸದೆ, ಇದು ಎನ್‌ಡಿಎ ಕುಟುಂಬದ ಪ್ರತಿಯೊಬ್ಬ ಸದಸ್ಯರ ಮತ್ತು ದೇಶದ ಜನರ ಸಾಮೂಹಿಕ ಸಾಧನೆ ಎಂದು ಅವರು ಬಣ್ಣಿಸಿದ್ದಾರೆ.2014ಕ್ಕೆ ಮುನ್ನ ದೇಶವು ರಾಜಕೀಯ ಅಸ್ಥಿರತೆಯಿಂದ ಬಳಲುತ್ತಿತ್ತು ಮತ್ತು ಅದು ದೇಶಕ್ಕೆ ಹಾನಿ ಉಂಟುಮಾಡಿತ್ತು. ಆದರೆ ಈಗ ಜನರು ಸ್ಥಿರ ಸರ್ಕಾರದ ಕಾರ್ಯವೈಖರಿಯನ್ನು ಕಾಣುತ್ತಿದ್ದಾರೆ ಎಂದು ಹೇಳಿದ್ದಾರೆ.

ದೇಶದ ಜನರಿಗೆ ತಮ್ಮ ಮೇಲೆ ನಂಬಿಕೆ ಇಟ್ಟು ಸೇವೆ ಸಲ್ಲಿಸಲು ಅವಕಾಶ ನೀಡಿದ್ದಕ್ಕಾಗಿ ಅವರಿಗೆ ಪ್ರಧಾನಿಯವರು ತಲೆಬಾಗಿ ನಮಿಸಿದ್ದಾರೆ. 2014 ರಲ್ಲಿ ಎನ್ ಡಿ ಎ ಸರಕಾರ ಗೆದ್ದಾಗ ಜನರಿಗೆ ಹೊಸ ಭರವಸೆ ಬಂದ ಹಾಗಾಗಿತ್ತು. ಆ ಭರವಸೆಯನ್ನು ಮುಂದೆಯೂ ಉಳಿಸಿಕೊಂಡು ದೇಶವನ್ನು ಮುನ್ನಡೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕರೆ ನೀಡಿದರು.

ಜವಾಹರಲಾಲ್ ನೆಹರೂ ಅವರು 1952ರ ಮೇ 13ರಿಂದ 1964ರ ಮೇ 27ರವರೆಗೆ ಒಟ್ಟು 4,398 ದಿನಗಳ ಕಾಲ ನಿರಂತರವಾಗಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಈ ದಾಖಲೆಯು ಕಳೆದ 64 ವರ್ಷಗಳಿಂದ ಯಾರಿಂದಲೂ ಮುರಿಯಲ್ಪಟ್ಟಿರಲಿಲ್ಲ ಎಂಬುದು ವಿಶೇಷವಾಗಿದೆ. ಜೂನ್ 10ರಂದು ಪ್ರಧಾನಿ ಮೋದಿಯವರು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ 4,398 ದಿನಗಳ ನಿರಂತರ ಸೇವೆಯ ದಾಖಲೆಯನ್ನು ಮುರಿದು, 4,399 ದಿನಗಳ ಸೇವಾ ಮೈಲಿಗಲ್ಲನ್ನು ತಲುಪಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೆಹಲಿ ಭೇಟಿ: ಕೇಂದ್ರ ಸಚಿವರ ಜೊತೆ ಮಾತುಕತೆ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಕೇಂದ್ರ ಇಂಧನ, ವಸತಿ ಮತ್ತು ನಗರಾಭಿವೃದ್ಧಿ ಸಚಿವ ಮನೋಹರಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿ, ಬೆಂಗಳೂರಿನ ಪ್ರಮುಖ ಮೆಟ್ರೋ ಮತ್ತು ಸಾರಿಗೆ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುಮೋದನೆ ಕೋರಿದ್ದಾರೆ.

ಪ್ರಮುಖ ಬೇಡಿಕೆಗಳು:

  • ಮೆಟ್ರೋ ಮೂರನೇ ಹಂತ (ಡಬಲ್ ಡೆಕ್ಕರ್ ಯೋಜನೆ): 9,700 ಕೋಟಿ ರೂ. ವೆಚ್ಚದ 44.65 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಮೇಲ್ಸೇತುವೆ ಯೋಜನೆಗೆ ಬಿಎಂಆರ್‌ಸಿಎಲ್ (BMRCL) ಪ್ರಸ್ತಾಪಿಸಿರುವ ಸಣ್ಣ ಬದಲಾವಣೆಗಳಿಗೆ ಅನುಮತಿ ಕೋರಲಾಗಿದೆ. ಈ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ.
  • ಮೆಟ್ರೋ ಎರಡನೇ ಹಂತದ ಪರಿಷ್ಕೃತ ವೆಚ್ಚ: ಈ ಯೋಜನೆಯ ಅಂದಾಜು ವೆಚ್ಚವು ಆರಂಭಿಕ 26,405.14 ಕೋಟಿ ರೂ.ನಿಂದ 40,425.02 ಕೋಟಿ ರೂ.ಗೆ (14,019.88 ಕೋಟಿ ರೂ. ಹೆಚ್ಚಳ) ಏರಿಕೆಯಾಗಿದ್ದು, ಇದಕ್ಕೆ ತುರ್ತಾಗಿ ಅನುಮೋದನೆ ನೀಡುವಂತೆ ಮನವಿ ಮಾಡಲಾಗಿದೆ.
  • ಸರ್ಜಾಪುರ-ಹೆಬ್ಬಾಳ ಮೆಟ್ರೋ ಯೋಜನೆ: 25,999 ಕೋಟಿ ರೂ. ಅಂದಾಜು ವೆಚ್ಚದ ಈ ಯೋಜನೆಯ ಪರಿಷ್ಕೃತ ಡಿಪಿಆರ್ (DPR) ಅನ್ನು ಏಪ್ರಿಲ್ 29, 2026ರಂದು ಕೇಂದ್ರಕ್ಕೆ ಸಲ್ಲಿಸಲಾಗಿದ್ದು, ಇದಕ್ಕೆ ಶೀಘ್ರ ಅನುಮತಿ ನೀಡಬೇಕೆಂದು ಕೋರಲಾಗಿದೆ.
  • ಪ್ರಾದೇಶಿಕ ಕ್ಷಿಪ್ರ ರೈಲು ಸಾರಿಗೆ ವ್ಯವಸ್ಥೆ (RRTS): ಬೆಂಗಳೂರನ್ನು ಮೈಸೂರು, ಕನಕಪುರ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರದೊಂದಿಗೆ ಸಂಪರ್ಕಿಸುವ RRTS ಯೋಜನೆಯನ್ನು ಜಾರಿಗೆ ತರಲು ಅನುಮತಿ ಕೋರಲಾಗಿದೆ.

​ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಗಾಗಿ ಈ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ತ್ವರಿತ ಸ್ಪಂದನೆ ಸಿಗುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ.