ಧರ್ಮಸ್ಥಳ ಪ್ರಕರಣದ ತನಿಖಾ ಪ್ರಗತಿಯನ್ನು ಚರ್ಚಿಸಲು, ಬೆಳ್ತಂಗಡಿಯ ಎಸ್ಐಟಿ ಕಚೇರಿಯಿಂದ ಚಿಕ್ಕಮಗಳೂರಿನ ಎಸ್ಪಿ ಹಾಗೂ ಎಸ್ಐಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರನ್ನು ಭೇಟಿಯಾಗಲು ಅಧಿಕಾರಿಗಳ ತಂಡವೊಂದು ಇನೋವಾ ಕಾರಿನಲ್ಲಿ ಚಿಕ್ಕಮಗಳೂರಿಗೆ ತೆರಳುತ್ತಿತ್ತು. ಈ ವೇಳೆ ಚಾರ್ಮಾಡಿ ಘಾಟ್ನ ತಿರುವೊಂದರಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆಯಲ್ಲೇ ಪಲ್ಟಿಯಾಗಿ ತಲೆಕೆಳಗಾಗಿದೆ.
ಈ ದುರದೃಷ್ಟಕರ ಅಪಘಾತದಲ್ಲಿ ಎಸ್ಐಟಿ ಎಸ್ಪಿ ಸಿ.ಎ. ಸೈಮನ್, ಇನ್ಸ್ಪೆಕ್ಟರ್ ಕುಸುಮಾಧರ್, ಪೊಲೀಸ್ ಸಿಬ್ಬಂದಿ (ಪಿಸಿ) ಮಂಜುನಾಥ್ ಹಾಗೂ ಕಾರಿನ ಚಾಲಕ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ.
ಘಟನೆ ನಡೆದ ತಕ್ಷಣ ಸ್ಥಳೀಯರು ಮತ್ತು ವಾಹನ ಸವಾರರು ಸ್ಥಳಕ್ಕೆ ಧಾವಿಸಿ, ಕಾರಿನಲ್ಲಿದ್ದವರನ್ನು ಹೊರಗೆ ತೆಗೆಯಲು ನೆರವಾಗಿದ್ದಾರೆ. ಗಾಯಾಳುಗಳನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿದ್ದು, ಘಾಟ್ ರಸ್ತೆಯ ಸಂಚಾರವನ್ನು ಸುಗಮಗೊಳಿಸಿದ್ದಾರೆ.
ಮಂಗಳೂರು, ಜೂನ್ 16: ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವ ಮಕ್ಕಳಿಗೆ ರಕ್ಷಣೆಯನ್ನು ಒದಗಿಸುವ ನಿಟ್ಟಿನಲ್ಲಿ, ನಾಲ್ಕು ವರ್ಷ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಮಂಗಳೂರು ನಗರ ಸಂಚಾರ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಶಾಲೆಗಳು ಪುನರಾರಂಭಗೊಂಡಿರುವ ಹಿನ್ನೆಲೆಯಲ್ಲಿ, ಈ ನಿಯಮದ ಕುರಿತು ಪೋಷಕರಲ್ಲಿ ಅರಿವು ಮೂಡಿಸುವ ಜಾಗೃತಿ ಅಭಿಯಾನವನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.
ಬೆಳಗಿನ ಸಮಯದಲ್ಲಿ ಶಾಲೆಗಳ ಬಳಿ ಭೇಟಿ ನೀಡುತ್ತಿರುವ ಪೊಲೀಸರು, ಪೋಷಕರಿಗೆ ನ್ಯಾಯಾಲಯದ ನಿರ್ದೇಶನಗಳ ಬಗ್ಗೆ ನೆನಪಿಸುತ್ತಿದ್ದಾರೆ. ಅನೇಕ ಪೋಷಕರು ಸ್ವತಃ ಹೆಲ್ಮೆಟ್ ಧರಿಸಿದರೂ, ಮಕ್ಕಳ ಸುರಕ್ಷತೆಯ ವಿಷಯದಲ್ಲಿ ಅಜಾಗರೂಕತೆ ವಹಿಸುವುದು ಕಂಡುಬರುತ್ತಿದೆ. “ಶಾಲೆ ಹತ್ತಿರವಿದೆ” ಅಥವಾ “ಸ್ವಲ್ಪ ದೂರದ ಪ್ರಯಾಣ” ಎಂಬ ಕಾರಣಕ್ಕೆ ಹೆಲ್ಮೆಟ್ ಧರಿಸದಿರುವುದು ಅಪಾಯಕಾರಿ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಸಣ್ಣ ಅಪಘಾತಗಳಲ್ಲೂ ವಾಹನದ ಸಮತೋಲನ ತಪ್ಪಿ ಮಕ್ಕಳು ತಲೆಗೆ ಗಂಭೀರ ಪೆಟ್ಟು ಮಾಡಿಕೊಳ್ಳುವ ಸಾಧ್ಯತೆಗಳಿರುವುದರಿಂದ ಈ ಮುನ್ನೆಚ್ಚರಿಕೆ ಅತ್ಯಗತ್ಯವಾಗಿದೆ.
ಹೆಲ್ಮೆಟ್ ಕೇವಲ ದಂಡದಿಂದ ತಪ್ಪಿಸಿಕೊಳ್ಳಲು ಮಾತ್ರವಲ್ಲ, ಬದಲಾಗಿ ಮಕ್ಕಳ ಜೀವ ರಕ್ಷಣೆಗಾಗಿ ಎಂಬುವುದನ್ನು ಪೋಷಕರು ಅರಿತುಕೊಳ್ಳಬೇಕು. ಇದಲ್ಲದೆ, ನಾಲ್ಕು ವರ್ಷದೊಳಗಿನ ಮಕ್ಕಳಿಗೆ ಹೆಲ್ಮೆಟ್ ಜೊತೆಗೆ, ಸವಾರ ಅಥವಾ ಹಿಂಬದಿ ಸವಾರರಿಗೆ ಮಗುವನ್ನು ಸುರಕ್ಷಿತವಾಗಿ ಬಂಧಿಸಲು ‘ಸೆಫ್ಟಿ ಬೆಲ್ಟ್’ಗಳನ್ನು ಬಳಸುವುದು ಕಡ್ಡಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂದೆ ನಡೆಸಿದ ಅಭಿಯಾನಗಳ ಹೊರತಾಗಿಯೂ, ಇನ್ನೂ ಅನೇಕರು ಈ ನಿಯಮವನ್ನು ನಿರ್ಲಕ್ಷಿಸುತ್ತಿದ್ದಾರೆ. ವಿಶೇಷವಾಗಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ಸುಮಾರು 80 ಪ್ರತಿಶತದಷ್ಟು ಮಕ್ಕಳು ಹೆಲ್ಮೆಟ್ ಧರಿಸುತ್ತಿಲ್ಲ ಎಂದು ಪೊಲೀಸರು ಬೇಸರ ವ್ಯಕ್ತಪಡಿಸಿದ್ದಾರೆ. ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗಗಳಲ್ಲಿ ಈ ನಿಯಮ ಪಾಲನೆಯ ಕೊರತೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಮಗುವಿನ ತಲೆಗೆ ಸರಿಯಾಗಿ ಹೊಂದಿಕೊಳ್ಳುವ ಅಳತೆಯ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ನಿಯಮ ಉಲ್ಲಂಘಿಸಿದರೆ 500 ರಿಂದ 1,000 ರೂಪಾಯಿಗಳವರೆಗೆ ದಂಡ ವಿಧಿಸಲಾಗುವುದು, ಅಲ್ಲದೆ ಚಾಲನಾ ಪರವಾನಗಿಯನ್ನು ಅಮಾನತು ಮಾಡುವ ಅಧಿಕಾರವೂ ಅಧಿಕಾರಿಗಳಿಗೆ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಕ್ಕಳಿಗೆ ಸಂಚಾರ ಶಿಸ್ತನ್ನು ಕಲಿಸುವುದು ಪೋಷಕರ ಜವಾಬ್ದಾರಿ ಎಂದು ಅವರು ಮನವಿ ಮಾಡಿದ್ದಾರೆ.
ಸುಬ್ರಹ್ಮಣ್ಯದ ಕುಲ್ಕುಂದ-ಬಿಸ್ಲೆ ರಸ್ತೆಯ ಡಿಪೋ ಸಮೀಪ, ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಪ್ರಕರಣವೊಂದರಲ್ಲಿ ಸುಬ್ರಹ್ಮಣ್ಯ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಜೂನ್ 13ರಂದು KA-13 D 1923 ನೋಂದಣಿ ಸಂಖ್ಯೆಯ ಪಿಕಪ್ ವಾಹನವು ಆಯತಪ್ಪಿ ಬಿದ್ದ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ತೆರಳಿ, ಅಲ್ಲಿ ಚಾಲಕ ಚಂದ್ರು ಅಲಿಯಾಸ್ ಚಂದ್ರಶೇಖರ (ಹಾಸನ ಜಿಲ್ಲೆಯ ಅರಕಲಗೂಡು ನಿವಾಸಿ) ಮತ್ತು ಕ್ಲೀನರ್ ಮೋಹನ್ ಅವರನ್ನು ವಿಚಾರಣೆಗೊಳಪಡಿಸಲಾಯಿತು.
ಯಾವುದೇ ಪರವಾನಗಿ ಇಲ್ಲದೆ, ಮಾಂಸ ಮಾರಾಟದ ಉದ್ದೇಶದಿಂದ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದುದು ಬೆಳಕಿಗೆ ಬಂದಿದೆ. ವಾಹನ ಅಪಘಾತಕ್ಕೀಡಾದಾಗ ಆರೋಪಿಗಳು ಜಾನುವಾರುಗಳನ್ನು ಇಳಿಸಿ ಓಡಿಸಿದ್ದರು, ನಂತರ ಪೊಲೀಸರು ಅವುಗಳನ್ನು ಪತ್ತೆ ಹಚ್ಚಿ ರಕ್ಷಿಸಿದ್ದಾರೆ.
ಪೊಲೀಸರು ಪಿಕಪ್ ವಾಹನ ಮತ್ತು ಜಾನುವಾರುಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳ ವಿರುದ್ಧ ಕರ್ನಾಟಕ ಗೋವಂಶ ಹತ್ಯೆ ಪ್ರತಿಬಂಧಕ ಕಾಯ್ದೆ-2020, ಪ್ರಾಣಿ ಸಂರಕ್ಷಣಾ ಕಾಯ್ದೆ-1960 ಮತ್ತು ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಅನಿಶ್ಚಿತ ಮಳೆಯಿಂದಾಗಿ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಬಿಸಿಲು ಮತ್ತು ತೇವಾಂಶದ ಏರುಪೇರಿನಿಂದಾಗಿ ಡೆಂಗ್ಯೂ, ವೈರಲ್ ಜ್ವರ, ಚರ್ಮರೋಗ ಮತ್ತು ಉಸಿರಾಟದ ಸಮಸ್ಯೆಗಳು ಹೆಚ್ಚಾಗುತ್ತಿವೆ.
ಆರೋಗ್ಯ ಸಮಸ್ಯೆ: ಜಿಲ್ಲೆಯಲ್ಲಿ ಈಗಾಗಲೇ 20ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ವೈರಲ್ ಜ್ವರದ ಲಕ್ಷಣಗಳು ಡೆಂಗ್ಯೂವಿನಂತೆಯೇ ಇರುವುದರಿಂದ ರೋಗ ಪತ್ತೆಹಚ್ಚುವಲ್ಲಿ ಸವಾಲು ಎದುರಾಗಿದೆ. ಮಕ್ಕಳು ಮತ್ತು ವೃದ್ಧರು ಹೆಚ್ಚು ಬಾಧಿತರಾಗುತ್ತಿದ್ದಾರೆ.
ಸೊಳ್ಳೆಗಳ ಹಾವಳಿ: ಮನೆ ಸುತ್ತಮುತ್ತ ನೀರು ನಿಲ್ಲುತ್ತಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದ್ದು, ಇದು ಡೆಂಗ್ಯೂ ಹರಡುವಿಕೆಗೆ ಪ್ರಮುಖ ಕಾರಣವಾಗಿದೆ.
ಮುನ್ನೆಚ್ಚರಿಕೆ ಕ್ರಮ: ಮನೆ ಹಾಗೂ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಆರೋಗ್ಯ ಇಲಾಖೆ ಸೂಚಿಸಿದೆ. ರೋಗದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಪಡೆಯುವಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ನೀರಿನ ಗುಣಮಟ್ಟ: ಮಕ್ಕಳ ಸುರಕ್ಷತೆಗಾಗಿ ಅಂಗನವಾಡಿ, ಶಾಲೆ ಮತ್ತು ಕಾಲೇಜುಗಳಲ್ಲಿ ಬಳಸುವ ನೀರಿನ ಗುಣಮಟ್ಟವನ್ನು ಕಡ್ಡಾಯವಾಗಿ ಪರೀಕ್ಷಿಸುವಂತೆ ಜಿಲ್ಲಾ ಪಂಚಾಯಿತಿ ನಿರ್ದೇಶನ ನೀಡಿದೆ.ರಾಜ್ಯದ ಎಲ್ಲ ಜಿಲ್ಲಾ ಪಂಚಾಯಿತಿಗಳಿಗೆ ಪಂಚಾಯತ್ ರಾಜ್ ಇಲಾಖೆಯಿಂದ ನಿರ್ದೇಶನ ರವಾನೆಯಾಗಿದ್ದು, ನೀರಿನ ಮೂಲಗಳನ್ನು ಲ್ಯಾಬ್ ಪರೀಕ್ಷೆಗೆ ಒಳಪಡಿಸಿ ಗುಣಮಟ್ಟದ ನೀರನ್ನು ಮಾತ್ರ ಬಳಕೆ ಮಾಡುವಂತೆ ತಿಳಿಸಲಾಗಿದೆ. ಜಿಲ್ಲೆಯಲ್ಲಿ ಈ ಕ್ರಮವನ್ನು ಮತ್ತಷ್ಟು ವೇಗಗೊಳಿಸಲು ಆರೋಗ್ಯ ಮತ್ತು ಪಂಚಾಯತ್ ರಾಜ್ ಇಲಾಖೆ ಮುಂದಾಗಿದೆ.
ಒಟ್ಟಾರೆಯಾಗಿ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಮಾನವಾಗಿ ಹರಡುತ್ತಿರುವ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಸಾರ್ವಜನಿಕರ ಜಾಗೃತಿ ಮತ್ತು ಸ್ವಚ್ಛತೆ ಅತಿ ಅಗತ್ಯವಾಗಿದೆ.
ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ, ಮೃತಪಟ್ಟ 68,776 ಮಹಿಳೆಯರ ಖಾತೆಗಳಿಗೆ ಹಣ ಜಮೆಯಾಗಿರುವುದು ಪತ್ತೆಯಾಗಿದೆ.ಈ ರೀತಿಯಾಗಿ ಸುಮಾರು 79,75,66,000 ರೂಪಾಯಿಗಳಷ್ಟು ಸರ್ಕಾರಿ ಹಣ ಪೋಲಾಗಿರುವುದು ಬೆಳಕಿಗೆ ಬಂದಿದೆ.
ರಾಜ್ಯದಲ್ಲಿ 1.24 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿದ್ದಾರೆ. ಹಣದ ದುರುಪಯೋಗವನ್ನು ತಡೆಯಲು ಸರ್ಕಾರ ಯೋಜನೆಯನ್ನು ಪರಿಷ್ಕರಿಸಲು ಮುಂದಾಗಿದೆ. ಮೃತಪಟ್ಟವರ ಹೆಸರಿನಲ್ಲಿ ಹಣ ಪಡೆದವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಮತ್ತು ಹಂತ ಹಂತವಾಗಿ ಹಣವನ್ನು ವಾಪಸ್ ಪಡೆಯಲಾಗುತ್ತಿದೆ. ಒಟ್ಟು 92 ಬ್ಯಾಂಕ್ ಖಾತೆಗಳಿಗೆ ಮಹಿಳೆಯ ಮರಣದ ನಂತರವೂ ಹಣ ಪಾವತಿಯಾಗಿದೆ.
ಮೃತಪಟ್ಟ ಮಹಿಳೆಯರ ಖಾತೆಗೆ ಜಮೆಯಾದ ಹಣವನ್ನು ವಾಪಸ್ ಪಡೆಯುವ ಕುರಿತು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮತ್ತು ಬ್ಯಾಂಕ್ ಆಡಳಿತ ಮಂಡಳಿಯವರು ಸಭೆ ನಡೆಸಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ನ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರು ಭಾನುವಾರ ರಾತ್ರಿ ಉಡುಪಿಯ ಐತಿಹಾಸಿಕ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ತಮ್ಮ ಕುಟುಂಬದ ಗುರೂಜಿಯೊಂದಿಗೆ ಆಗಮಿಸಿದ್ದ ಅವರಿಗೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅರ್ಚಕರು ಶಾಲು ಹೊದಿಸಿ, ಪ್ರಸಾದ ನೀಡಿ ಗೌರವಿಸಿದರು.
ಕೊಲ್ಲೂರು ಮೂಕಾಂಬಿಕೆಯ ದರ್ಶನದ ನಂತರ, ಅನಂತ್ ಅಂಬಾನಿ ಅವರು ಉಡುಪಿ ಶ್ರೀಕೃಷ್ಣ ಮಠಕ್ಕೂ ಭೇಟಿ ನೀಡಿದರು. ಮಠದ ಆಡಳಿತ ಮಂಡಳಿಯಿಂದ ಆತ್ಮೀಯ ಸ್ವಾಗತವನ್ನು ಸ್ವೀಕರಿಸಿದ ಅವರು, ಶ್ರೀಕೃಷ್ಣನ ದರ್ಶನ ಪಡೆದರು. ಬಳಿಕ ಪರ್ಯಾಯ ಶೀರೂರು ಮಠದ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಭಾರತೀಯ ಜನತಾ ಪಾರ್ಟಿ ಮಂಗಳೂರು ಮಂಡಲ, ಬಿ ಎಲ್. ಎ 2 ಹಾಗೂ ಕಾರ್ಯಕರ್ತರ ವಿಶೇಷ ಸಭೆಯು ಇಂದು ಅಸೈಗೋಳಿ ಬಂಟರ ಭವನದಲ್ಲಿಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ಉಸ್ತುವಾರಿಗಳಾದ ಶ್ರೀ ರಾಧಾಮೋಹನ್ ಅಗರ್ವಾವಾಲ್ ಗಣಉಪಸ್ಥಿತಿಯಲ್ಲಿ ವಿಶೇಷ ಸಭೆ ನಡೆಯಿತು.
ಸಭೆ ಪ್ರಾರಂಭದ ಮೊದಲು ವಂದೇ ಮಾತರಂ ಹಾಡಿ, ದೀಪ ಬೆಳಗಿಸಿ ಅತಿಥಿ ಗಣ್ಯರಿಂದ ತಾಯಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಲಾಯಿತು ಬಿಜೆಪಿ ಮಂಡಲ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೈತ ಬೈಲ್ ಸ್ವಾಗತಿಸಿದರು,
ಬಿಜೆಪಿ ಮಂಗಳೂರು ಮಂಡಲದ ಪ್ರಧಾನ ಕಾರ್ಯದರ್ಶಿ ವಕೀಲರಾದ ಮೋಹನ್ ರಾಜ್ ಕೆ ಆರ್ ಪ್ರಸ್ತಾವಿಕವಾಗಿ ಮಂಗಳೂರು ಮಂಡಲ ದ ಸಂಘಟನಾತ್ಮಕ ವಿಷಯಗಳ ಬಗ್ಗೆ ವರದಿ ಮಂಡಿಸಿದರು ಈ ಸಭೆಯ ವೇದಿಕೆಯಲ್ಲಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಬಿಜೆಪಿ ರಾಜ್ಯ ಕಾರ್ಯದರ್ಶಿ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ , ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ವಿಧಾನ ಪರಿಷತ್ ಶಾಸಕರು ಕಿಶೋರ್ ಕುಮಾರ್ ಬೋಟ್ಯಾಡಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು ಮಂಗಳೂರು ಮಂಡಲದ ಪ್ರಭಾರಿ ಪೂಜಾ ಪೈ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು ರವೀಂದ್ರ ಶೆಟ್ಟಿ ಉಳಿದೋಟ್ಟು, ಜಿಲ್ಲಾ ಕಾರ್ಯದರ್ಶಿ ಧನಲಕ್ಷ್ಮೀ ಗಟ್ಟಿ , ಜಿಲ್ಲಾ ಪ್ರಕೋಷ್ಟಗಳ ಸಂಚಾಲಕರು ಸುಧೀರ್ ಶೆಟ್ಟಿ ಕಣ್ಣೂರು ,ಮಂಗಳೂರು ಮಂಡಲದ ಬಿ ಎಲ್ ಎ-1 ಸಂಯೋಜಕರಾದ ಜಯ ಶ್ರೀ ಕರ್ಕೆರ, ಮಾಜಿ ಮಂತ್ರಿಗಳು ನಾಗರಾಜ ಶೆಟ್ಟಿ, ಮಂಗಳೂರು ಮಂಡಲದ ಮಾಜಿ ಅಧ್ಯಕ್ಷರಾದ ಚಂದ್ರ ಶೇಖರ್ ಉಚ್ಚಿಲ ರಾಜ್ಯ ಮೀನುಗಾರ ಪ್ರಕೋಷ್ಟ ಸಹ ಸಂಚಾಲಕರು ಯಶವಂತ ಅಮೀನ್ , ಜಿಲ್ಲಾ ವಕ್ತಾರ ಜೀವನ್ ತೊಕ್ಕೊಟ್ಟು, ಜಿಲ್ಲಾ ಮಾಧ್ಯಮ ಸಹ ಪ್ರಮುಖ್ ಹೇಮಂತ್ ಶೆಟ್ಟಿ ,ಹಿರಿಯ ಮುಖಂಡರುಗಳಾದ ಸೀತಾರಾಮ ಬಂಗೇರ ಟಿ ಜಿ ರಾಜಾರಾಮ್ ಭಟ್,ಜಿಲ್ಲಾ ಮಂಡಲದ ವಿವಿಧ ಮೋರ್ಚಾಗಳ ಅಧ್ಯಕ್ಷರು ಕಾರ್ಯದರ್ಶಿಗಳು ಪದಾಧಿಕಾರಿಗಳು ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಕಾರ್ಯದರ್ಶಿಗಳು ಪದಾಧಿಕಾರಿಗಳು ಬಿ ಎಲ್ ಎ 2 ಗಳು ಹೆಚ್ಚಿನ ಸಂಖ್ಯೆ ಉಪಸ್ಥಿತರಿದ್ದರು
ಕಾರ್ಯಕ್ರಮವನ್ನು ಮಂಗಳೂರು ಮಂಡಲದ ಉಪಾಧ್ಯಕ್ಷರು ಮನೋಜ್ ಆಚಾರ್ಯ ನಿರೂಪಿಸಿದರು. ಬಿಜೆಪಿ ಮಂಗಳೂರು ಮಂಡಲದ ಕಾರ್ಯದರ್ಶಿ ದಯಾನಂದ್ ತೊಕ್ಕೊಟ್ಟು ವಂದಿಸಿದರು
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿರುವ ಪ್ರವಾಸಿ ತಾಣ, ಚಾರಣ ಪ್ರಿಯರ ತಾಣ, ಗಡಾಯಿಕಲ್ಲುಗೆ ಅರಣ್ಯ ಇಲಾಖೆ ಮತ್ತೆ ನಿರ್ಬಂಧ ವಿಧಿಸಿದೆ.
ಮುಂಗಾರು ಮಳೆಯ ತೀವ್ರತೆಯಿಂದಾಗಿ ಚಾರಣ ಮಾರ್ಗದಲ್ಲಿ ಕಲ್ಲುಗಳು ಜಾರುವ ಅಪಾಯವಿರುವುದರಿಂದ, ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಅರಣ್ಯ ಇಲಾಖೆಯು ಜೂನ್ 14ರಿಂದ ಗಡಾಯಿಕಲ್ಲು ಚಾರಣಕ್ಕೆ ತಾತ್ಕಾಲಿಕ ನಿಷೇಧ ಹೇರಿದೆ.
ಈ ಹಿಂದೆ ಬೇಸಿಗೆಯ ಕಾಡ್ಗಿಚ್ಚು ಮತ್ತು ಹುಲಿ ಗಣತಿ ಕಾರಣಕ್ಕೆ ನಿಷೇಧವಿದ್ದ ಗಡಾಯಿಕಲ್ಲನ್ನು ಜೂನ್ 1ರಂದು ಪ್ರವಾಸಿಗರಿಗಾಗಿ ಮತ್ತೆ ತೆರೆಯಲಾಗಿತ್ತು. ಈ ಅಲ್ಪಾವಧಿಯಲ್ಲೇ (ಜೂನ್ 7ರಂದು) ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದರು.
ಈ ನಿಷೇಧವು ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿದ್ದು, ಹವಾಮಾನ ಪರಿಸ್ಥಿತಿ ಸುಧಾರಿಸಿದ ನಂತರವೇ ಚಾರಣಕ್ಕೆ ಅವಕಾಶ ನೀಡುವ ಕುರಿತು ಅರಣ್ಯ ಇಲಾಖೆ ತೀರ್ಮಾನಿಸಲಿದೆ.
ವಳಮಲೆ ನಿವಾಸಿ ಸುನಿ ಯಾನೆ ಸುರೇಶ್ ರೈ (43) ಇಂದು ಹೃದಯಾಘಾತದಿಂದ ನಿಧನರಾದರು. ಇವರು ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು, ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತರಾಗಿದ್ದರು.
ನಿನ್ನೆ ರಾತ್ರೆ ಊಟ ಮಾಡಿ ಮಲಗಿದ ಅವರು, ಇಂದು ಬೆಳಗ್ಗೆ ಏಳದೆ ಇದ್ದಾಗ ಮನೆಯವರು ಕೂಡಲೇ ಬದಿಯಡ್ಕದ ಆಸ್ಪತ್ರೆಗೆ ಕೊಂಡೊಯ್ದರು. ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ಡಾಕ್ಟರು ಘೋಷಿಸಿದರು. ಸುರೇಶ ರೈ ಅವರು ಅವಿವಾಹಿತರಾಗಿದ್ದು, ತಂದೆ ರಾಧಾಕೃಷ್ಣ ರೈ ತಾಯಿ ಚಂದ್ರಾವತಿ, ಸಹೋದರ ಪ್ರಸನ್ನ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
‘ಪ್ರಿಯದರ್ಶಿನಿ’ ಯೋಜನೆಯು ಯುಡಿಎಫ್ ನ ಚುನಾವಣಾ ಭರವಸೆಯಾಗಿದ್ದು, ಕಾಸರಗೋಡು ಜಿಲ್ಲೆಗೂ ವಿಸ್ತರಿಸಲ್ಪಟ್ಟಿದೆ. ಇದರ ಅಡಿಯಲ್ಲಿ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ದೊರೆಯಲಿದೆ.
ಜೂನ್ 15 ರ ಬೆಳಿಗ್ಗೆ 9 ಗಂಟೆಯಿಂದ ಈ ಸೌಲಭ್ಯವು ಜಾರಿಗೆ ಬರಲಿದೆ.
ವ್ಯಾಪ್ತಿ : ಜಿಲ್ಲೆಯ 75 ಬಸ್ ಸರ್ವೀಸ್ಗಳಲ್ಲಿ ಈ ಸೌಲಭ್ಯ ಲಭ್ಯವಿರುತ್ತದೆ. ಕಾಸರಗೋಡು-ಮಂಗಳೂರು, ಕಾಸರಗೋಡು-ಸುಳ್ಯ ಮತ್ತು ಕಾಸರಗೋಡು-ಪುತ್ತೂರು ಅಂತರರಾಜ್ಯ ಮಾರ್ಗದ ಕೆಎಸ್ಆರ್ಟಿಸಿ ಬಸ್ಗಳಿಗೂ ಇದು ಅನ್ವಯಿಸುತ್ತದೆ. ಕಾಸರಗೋಡಿನ ಟೌನ್ ಟು ಟೌನ್, ಲಿಮಿಟೆಡ್ ಮತ್ತು ಆರ್ಡಿನರಿ ಬಸ್ಗಳಿಗೆ ಈ ಯೋಜನೆಯನ್ನು ವಿಸ್ತರಿಸಲಾಗಿದೆ.
ಉದ್ಘಾಟನೆ: ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿ ವಿ. ಡಿ. ಸತೀಶನ್ ಅವರು ಈ ಯೋಜನೆಯನ್ನು ಉದ್ಘಾಟಿಸಲಿದ್ದು, ಕಾಸರಗೋಡಿನಲ್ಲಿ ಶಾಸಕ ಎನ್. ಎ. ನೆಲ್ಲಿಕುನ್ನು ಮತ್ತು ಉಪ್ಪಳದಲ್ಲಿ ಶಾಸಕ ಎ. ಕೆ. ಅಶ್ರಫ್ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ.
ಉಪಯೋಗ: ನಿತ್ಯ ಪ್ರಯಾಣಿಸುವ ವಿದ್ಯಾರ್ಥಿನಿಯರು ಮತ್ತು ಮಹಿಳೆಯರಿಗೆ ಈ ಯೋಜನೆಯು ಹೆಚ್ಚಿನ ಅನುಕೂಲವನ್ನು ನೀಡಲಿದೆ.