ಗಡಾಯಿಕಲ್ಲು ಚಾರಣ ಮಳೆಯಿಂದಾಗಿ ಮತ್ತೆ ನಿಷೇಧ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿರುವ ಪ್ರವಾಸಿ ತಾಣ, ಚಾರಣ ಪ್ರಿಯರ ತಾಣ, ಗಡಾಯಿಕಲ್ಲುಗೆ ಅರಣ್ಯ ಇಲಾಖೆ ಮತ್ತೆ ನಿರ್ಬಂಧ ವಿಧಿಸಿದೆ.

ಮುಂಗಾರು ಮಳೆಯ ತೀವ್ರತೆಯಿಂದಾಗಿ ಚಾರಣ ಮಾರ್ಗದಲ್ಲಿ ಕಲ್ಲುಗಳು ಜಾರುವ ಅಪಾಯವಿರುವುದರಿಂದ, ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಅರಣ್ಯ ಇಲಾಖೆಯು ಜೂನ್ 14ರಿಂದ ಗಡಾಯಿಕಲ್ಲು ಚಾರಣಕ್ಕೆ ತಾತ್ಕಾಲಿಕ ನಿಷೇಧ ಹೇರಿದೆ.
ಈ ಹಿಂದೆ ಬೇಸಿಗೆಯ ಕಾಡ್ಗಿಚ್ಚು ಮತ್ತು ಹುಲಿ ಗಣತಿ ಕಾರಣಕ್ಕೆ ನಿಷೇಧವಿದ್ದ ಗಡಾಯಿಕಲ್ಲನ್ನು ಜೂನ್ 1ರಂದು ಪ್ರವಾಸಿಗರಿಗಾಗಿ ಮತ್ತೆ ತೆರೆಯಲಾಗಿತ್ತು. ಈ ಅಲ್ಪಾವಧಿಯಲ್ಲೇ (ಜೂನ್ 7ರಂದು) ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದರು.
ಈ ನಿಷೇಧವು ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿದ್ದು, ಹವಾಮಾನ ಪರಿಸ್ಥಿತಿ ಸುಧಾರಿಸಿದ ನಂತರವೇ ಚಾರಣಕ್ಕೆ ಅವಕಾಶ ನೀಡುವ ಕುರಿತು ಅರಣ್ಯ ಇಲಾಖೆ ತೀರ್ಮಾನಿಸಲಿದೆ.
