ವಾಣಿಜ್ಯ ಹಡಗಿನ ಮೇಲಿನ ದಾಳಿಯಲ್ಲಿ ಭಾರತೀಯರ ಸಾವು: ಅಮೆರಿಕಾಗೆ ಭಾರತದ ತೀವ್ರ ಆಕ್ಷೇಪ, ಉಲ್ಬಣಿಸಿದ ರಾಜತಾಂತ್ರಿಕ ಜಟಾಪಟಿ.

ಗಲ್ಫ್ ಆಫ್ ಒಮಾನ್ ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ನೌಕಾಪಡೆ ವಾಣಿಜ್ಯ ಹಡಗುಗಳ ಮೇಲೆ ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟಿದ್ದಾರೆ. ‘ಸೆಟ್ಟೆಬೆಲ್ಲೊ’ ತೈಲ ಟ್ಯಾಂಕರ್ ಮೇಲಿನ ದಾಳಿ ಈ ದುರಂತಕ್ಕೆ ಕಾರಣವಾಗಿದ್ದು, ಭಾರತೀಯ ಸಿಬ್ಬಂದಿ ಇದ್ದ ಇತರೆ ಹಡಗುಗಳನ್ನೂ ಅಮೆರಿಕ ತಡೆದಿದೆ.

ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರೊಂದಿಗೆ ಮಾತುಕತೆ ನಡೆಸಿ, ವಾಣಿಜ್ಯ ಹಡಗುಗಳ ಮೇಲೆ ಮಾರಕ ಶಕ್ತಿ ಬಳಸಿರುವುದನ್ನು ಬಲವಾಗಿ ಖಂಡಿಸಿದ್ದಾರೆ. ಭಾರತೀಯರ ಜೀವಹಾನಿಗೆ ಕಾರಣವಾದ ಇಂತಹ ಕ್ರಮಗಳು ಸ್ವೀಕಾರಾರ್ಹವಲ್ಲ ಮತ್ತು ಅಂತಾರಾಷ್ಟ್ರೀಯ ಕಾನೂನುಗಳಿಗೆ ವಿರುದ್ಧವಾಗಿದೆ ಎಂದು ಭಾರತ ಸ್ಪಷ್ಟಪಡಿಸಿದೆ. ಅಲ್ಲದೆ, ನವದೆಹಲಿಯಲ್ಲಿ ಅಮೆರಿಕದ ಚಾರ್ಜ್ ಡಿ ಅಫೈರ್ಸ್ ಅವರನ್ನು ಕರೆಸಿಕೊಂಡು ತೀವ್ರ ಪ್ರತಿಭಟನೆ ದಾಖಲಿಸಲಾಗಿದೆ.

ಅಮೆರಿಕವು ತನ್ನ ಭದ್ರತಾ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದು, ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ಆದೇಶಗಳನ್ನು ಎಲ್ಲ ವಾಣಿಜ್ಯ ಹಡಗುಗಳು ಪಾಲಿಸುವುದು ಕಡ್ಡಾಯ ಎಂದು ತಿಳಿಸಿದೆ. ಇರಾನ್ ತೈಲ ಸಾಗಣೆಯ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ ಎಂದು ಅಮೆರಿಕ ಎಚ್ಚರಿಕೆ ನೀಡಿದೆಈ ಘಟನೆಯು ಅಮೆರಿಕ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಸಂಬಂಧದಲ್ಲಿ ಬಿರುಕು ಮೂಡಿಸಿದ್ದು, ಗಲ್ಫ್ ಪ್ರದೇಶದಲ್ಲಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಭಾರತ ತನ್ನ ಪ್ರಜೆಗಳ ಸುರಕ್ಷತೆಗಾಗಿ ದೃಢ ನಿಲುವು ತಳೆದಿದ್ದು, ಮುಂದಿನ ದಿನಗಳಲ್ಲಿ ಉನ್ನತ ಮಟ್ಟದ ರಾಜತಾಂತ್ರಿಕ ಮಾತುಕತೆಗಳು ನಿರ್ಣಾಯಕವಾಗಿವೆ.

ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ – ಭಾರತದ ಸೇನಾ ಮುಖ್ಯಸ್ಥರಾಗಿ ಆಯ್ಕೆ

ಭಾರತದ ಮುಂದಿನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಅವರು ಪ್ರಸ್ತುತ ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹಾಲಿ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರ ನಿವೃತ್ತಿಯ ನಂತರ, ಜೂನ್ 30 ರಂದು ಧೀರಜ್ ಸೇಠ್ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರು 2028 ರ ಆಗಸ್ಟ್ 31 ರವರೆಗೆ ಈ ಹುದ್ದೆಯಲ್ಲಿ ಇರಲಿದ್ದಾರೆ.

ಇವರು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದು, 1986 ರ ಡಿಸೆಂಬರ್‌ನಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾದರು. ಇವರು 40 ವರ್ಷಗಳ ಸೇನಾ ಸೇವೆಯ ಅನುಭವ ಹೊಂದಿದ್ದಾರೆ.

1997 ರಲ್ಲಿ ಜನರಲ್ ಶಂಕರ್ ರಾಯ್ ಚೌಧರಿ ಅವರ ನಂತರ, ಆರ್ಮರ್ಡ್ ಕಾರ್ಪ್ಸ್ (ಸೈನಿಕ ವಿಭಾಗ) ನಿಂದ ಸೇನಾ ಮುಖ್ಯಸ್ಥರಾದ ಮೊದಲ ಅಧಿಕಾರಿ ಎಂಬ ಹೆಗ್ಗಳಿಕೆಗೆ ಧೀರಜ್ ಸೇಠ್ ಪಾತ್ರರಾಗಿದ್ದಾರೆ.

ಇವರು ಮರುಭೂಮಿ ವಲಯ, ಜಮ್ಮು ಮತ್ತು ಕಾಶ್ಮೀರ, 21ನೇ ಸ್ಟ್ರೈಕ್ ಕಾರ್ಪ್ಸ್, ದೆಹಲಿ ಪ್ರದೇಶದ ಕಮಾಂಡಿಂಗ್ ಆಫೀಸರ್, ಸೌತ್ ವೆಸ್ಟರ್ನ್ ಕಮಾಂಡ್ ಮತ್ತು ಸದರ್ನ್ ಕಮಾಂಡ್‌ನಲ್ಲಿ ವಿವಿಧ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅಲ್ಲದೆ, ವಿಶ್ವಸಂಸ್ಥೆಯ ಮಿಷನ್‌ನಲ್ಲಿ ಮತ್ತು ಸೇನಾ ಪ್ರಧಾನ ಕಚೇರಿಯಲ್ಲಿಯೂ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

ಕೇರಳ ಮುಖ್ಯಮಂತ್ರಿ ವಿ. ಡಿ ಸತೀಶನ್ ಅವರ ಕುಟುಂಬಕ್ಕೆ ಕೊಲೆ ಬೆದರಿಕೆ – ಕುಡಿದ ಮತ್ತಿನಲ್ಲಿ ಕೃತ್ಯ

ಕೇರಳದ ಮುಖ್ಯಮಂತ್ರಿ ವಿ.ಡಿ. ಸತೀಶನ್ ಮತ್ತು ಅವರ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಅಟ್ಟಿಂಗಲ್ ನಿವಾಸಿ ಸೋನಿ ಥಾಮಸ್ ಎಂದು ಗುರುತಿಸಲಾಗಿದೆ.

ಶುಕ್ರವಾರ ಸಂಜೆ ಅಜ್ಞಾತ ವ್ಯಕ್ತಿಯೊಬ್ಬ ತಿರುವನಂತಪುರದ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ಬೆದರಿಕೆ ಹಾಕಿದ್ದನು. ತನಗೆ ಸತೀಶನ್ ಇಷ್ಟವಿಲ್ಲ ಎಂಬ ಕಾರಣವನ್ನು ಆರೋಪಿ ನೀಡಿದ್ದನು.

ಪೊಲೀಸರು ಫೋನ್ ಸಿಗ್ನಲ್ ಟ್ರ್ಯಾಕ್ ಮಾಡುವ ಮೂಲಕ ಆರೋಪಿಯನ್ನು ಶನಿವಾರ ಬೆಳಿಗ್ಗೆ ಬಂಧಿಸಿದ್ದಾರೆ. ಆರೋಪಿಯು ಕರೆ ಮಾಡಿದ ಸಮಯದಲ್ಲಿ ಮದ್ಯದ ಅಮಲಿನಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಪ್ರಕ್ರಿಯೆ ನಡೆಯಲಿದೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಕೂಲಿ ಕಾರ್ಮಿಕನ ಚಿಕಿತ್ಸೆಗೆ ನಿಮ್ಮ ಸಹಾಯದ ಅಗತ್ಯವಿದೆ.

ಕಾಸರಗೋಡು: ಎಣ್ಮಕಜೆ ಪಂಚಾಯತ್‌ನ ಬೆದ್ರಂಪಳ್ಳ ಸಮೀಪದ ಬಲ್ತಕಲ್ಲು ನಿವಾಸಿ, ಕೂಲಿ ಕಾರ್ಮಿಕ ಬಿ.ಕೆ. ರಾಜೇಶ್ ಅವರು ಇದೀಗ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ತುರ್ತು ಚಿಕಿತ್ಸೆಗಾಗಿ ಸಾರ್ವಜನಿಕರ ಸಹಾಯ ಕೋರಿದ್ದಾರೆ.

ಘಟನೆಯ ಹಿನ್ನೆಲೆ:
ರಾಜೇಶ್ ಅವರು ಅಕಸ್ಮಾತ್ತಾಗಿ ತಲೆಯ ನರಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದು, ಸದ್ಯ ಕಂಕನಾಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರನ್ನು ಪೂರ್ಣವಾಗಿ ಗುಣಮುಖರನ್ನಾಗಿಸಲು ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿದ್ದು, ಅದಕ್ಕೆ ಸುಮಾರು 3 ಲಕ್ಷ ರೂಪಾಯಿ ವೆಚ್ಚವಾಗಬಹುದೆಂದು ವೈದ್ಯರು ತಿಳಿಸಿದ್ದಾರೆ.


​ಆರ್ಥಿಕ ಸಂಕಷ್ಟದಲ್ಲಿ ಕುಟುಂಬ:
ರಾಜೇಶ್ ಅವರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಇವರಿಗೆ ಇಬ್ಬರು ಸಣ್ಣ ಮಕ್ಕಳಿದ್ದಾರೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ಭರಿಸಲು ಕುಟುಂಬವು ಆರ್ಥಿಕವಾಗಿ ತುಂಬಾ ಹಿಂದುಳಿದಿದ್ದು, ಇದೀಗ ದಾನಿಗಳ ಮೊರೆ ಹೋಗಿದ್ದಾರೆ.

ಈ ಬಡ ಕುಟುಂಬಕ್ಕೆ ಸಹಾಯ ಮಾಡಲು ಬಯಸುವವರು ಕೆಳಕಂಡ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬಹುದಾಗಿದೆ:
​ಖಾತೆದಾರರ ಹೆಸರು: BHARATHI C
​ಬ್ಯಾಂಕ್ ಹೆಸರು: Kerala Grameena Bank, Perla Branch
​ಖಾತೆ ಸಂಖ್ಯೆ: 40583100004866
​IFSC ಕೋಡ್: KLGB0040583
​ಅಲ್ಲದೆ, ಚಿತ್ರದಲ್ಲಿರುವ 1000051838.jpg UPI ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕವೂ ನೇರವಾಗಿ ಆರ್ಥಿಕ ನೆರವು ನೀಡಬಹುದಾಗಿದೆ.

ದಾನಿಗಳ ಸಣ್ಣ ಸಹಾಯವೂ ಈ ಕುಟುಂಬದ ಪಾಲಿಗೆ ದೊಡ್ಡ ಆಸರೆಯಾಗಲಿದೆ.

ಗ್ರೆನೇಡ್ ಸ್ಫೋಟ – ತರಬೇತಿಯಲ್ಲಿದ್ದ ಇಬ್ಬರು ಸೈನಿಕರಿಗೆ ಗಂಭೀರ ಗಾಯ

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಸೆಕ್ಟರ್‌ನಲ್ಲಿರುವ ನಿಯಂತ್ರಣ ರೇಖೆಯ (ಎಲ್‌ಒಸಿ) ಸಮೀಪ ಆಕಸ್ಮಿಕವಾಗಿ ಗ್ರೆನೇಡ್ ಸ್ಫೋಟಗೊಂಡ ಪರಿಣಾಮ, ಇಬ್ಬರು ಭಾರತೀಯ ಸೇನಾ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ.

ಎಲ್‌ಒಸಿಯ ಮಾಲ್ಟಿ ಸೆಕ್ಟರ್‌ನಲ್ಲಿರುವ ಸೇನೆಯ ಫಾರ್ವರ್ಡ್ ಪೋಸ್ಟ್ ಬಳಿ ಈ ಅವಘಡ ಸಂಭವಿಸಿದೆ. ಬಿಹಾರ ಬೆಟಾಲಿಯನ್‌ಗೆ ಸೇರಿದ ಲ್ಯಾನ್ಸ್ ನಾಯಕ್ ರವೀಂದರ್ ಭೇರಾ ಮತ್ತು ಅಗ್ನಿವೀರ್ ಶಕ್ತಿ ಪ್ರಸಾದ್ ಎಂಬುವವರು ಗಾಯಗೊಂಡ ಸೈನಿಕರು. ಇವರು ದಿನನಿತ್ಯದ ತರಬೇತಿ ಮತ್ತು ಶಸ್ತ್ರಾಸ್ತ್ರ ನಿರ್ವಹಣೆಯ ಕವಾಯತು ನಡೆಸುತ್ತಿದ್ದಾಗ, ಗ್ರೆನೇಡ್ ಆಕಸ್ಮಿಕವಾಗಿ ಸ್ಫೋಟಗೊಂಡಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಘಟನೆಯಲ್ಲಿ ಗಾಯಗೊಂಡ ಸೈನಿಕರನ್ನು ತಕ್ಷಣವೇ ಪೂಂಚ್‌ನ 425 ಫೀಲ್ಡ್ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಮತ್ತು ತಜ್ಞ ಚಿಕಿತ್ಸೆಗಾಗಿ, ಸೈನಿಕರನ್ನು ಹೆಲಿಕಾಪ್ಟರ್ ಮೂಲಕ ಉಧಂಪುರದಲ್ಲಿರುವ ಉತ್ತರ ಕಮಾಂಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.ಈ ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಪಶ್ಚಿಮ ಬಂಗಾಳ : ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ನನ್ನಷ್ಟು ಕೆಟ್ಟ ವ್ಯಕ್ತಿ ಯಾರೂ ಇರಲ್ಲ – ಸಿ. ಎಂ. ಸುವೇಂದು ಅಧಿಕಾರಿ ಖಡಕ್ ವಾರ್ನಿಂಗ್

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ವಿಷಯದಲ್ಲಿ ಕಠಿಣ ನಿಲುವು ಪ್ರದರ್ಶಿಸಿದ್ದಾರೆ. ಹಿಂಸಾಚಾರ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಧ್ವಂಸ ಮಾಡುವ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿರುವ ಅವರು, ಇಂತಹ ಘಟನೆಗಳು ಮರುಕಳಿಸಿದರೆ ತಾನು ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಗುಡುಗಿದ್ದಾರೆ.

​ರಾಜ್ಯದಲ್ಲಿ ಗೂಂಡಾಗಿರಿ ಮತ್ತು ಸಮಾಜವಿರೋಧಿ ಕೃತ್ಯಗಳಿಗೆ ಯಾವುದೇ ಅವಕಾಶ ನೀಡುವುದಿಲ್ಲ. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಶೂನ್ಯ ಸಹನೆ (Zero Tolerance) ನೀತಿಯನ್ನು ಅನುಸರಿಸಲಾಗುವುದು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿರುವುದರಿಂದ ಆಡಳಿತದಲ್ಲಿ ಉತ್ತಮ ಸಮನ್ವಯತೆ ಮೂಡಿದೆ. ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ರಾಜ್ಯದ ಅಭಿವೃದ್ಧಿ ಕಾರ್ಯಗಳು ವೇಗವಾಗಿ ಸಾಗುತ್ತಿವೆ.

ಪಾರ್ಕ್ ಸರ್ಕಸ್ ಮತ್ತು ಅಸನ್ಸೋಲ್‌ನಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಸರ್ಕಾರ ಯಶಸ್ವಿಯಾಗಿ ನಿಭಾಯಿಸಿದೆ.ಗಡಿ ಭದ್ರತೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಸಿಲಿಗುರಿ ಕಾರಿಡಾರ್ (ಚಿಕನ್ಸ್ ನೆಕ್) ಸೇರಿದಂತೆ ಗಡಿ ಭಾಗಗಳಲ್ಲಿ ಬಿಎಸ್‌ಎಫ್‌ಗೆ ಭೂಮಿ ಹಸ್ತಾಂತರ ಮತ್ತು ಬೇಲಿ ನಿರ್ಮಾಣ ಕಾರ್ಯಗಳು ಭರದಿಂದ ಸಾಗಿವೆ ಎಂದು ಸಿಎಂ ತಿಳಿಸಿದ್ದಾರೆ.

​ಒಟ್ಟಾರೆಯಾಗಿ, ರಾಜ್ಯದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಖಚಿತಪಡಿಸುವುದು ತಮ್ಮ ಸರ್ಕಾರದ ಮೊದಲ ಆದ್ಯತೆ ಎಂದು ಸುವೇಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ವೈದ್ಯಕೀಯ ಕೋರ್ಸ್ ಗಳಿಗೆ ಇಲ್ಲ ಶುಲ್ಕ ಹೆಚ್ಚಳ : ಸರ್ಕಾರದ ಮಹತ್ವದ ನಿರ್ಧಾರ

ಸರಕಾರದಿಂದ ವೈದ್ಯಕೀಯ ಕೋರ್ಸ್ ಗಳಿಗೆ ಶುಲ್ಕ ಹೆಚ್ಚಳ ಇಲ್ಲ ಎಂಬ ನಿರ್ಧಾರದಿಂದ ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಸಿದ್ಧರಾಗಿರುವ ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ನಿಜಕ್ಕೂ ಸಮಾಧಾನಕರವಾದ ಮತ್ತು ಸಂತೋಷದ ಸುದ್ದಿ ಕೇಳಿದಂತಾಗಿದೆ.

​ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ, ಸ್ನಾತಕ (Undergraduate) ಮತ್ತು ಸ್ನಾತಕೋತ್ತರ (Postgraduate) ಕೋರ್ಸ್‌ಗಳ ಶುಲ್ಕದಲ್ಲಿ ಯಾವುದೇ ರೀತಿಯ ಏರಿಕೆ ಇರುವುದಿಲ್ಲ. 2025-26ನೇ ಸಾಲಿನಲ್ಲಿ ಅನ್ವಯವಾಗುತ್ತಿದ್ದ ಶುಲ್ಕ ರಚನೆಯನ್ನೇ ಈ ವರ್ಷವೂ ಮುಂದುವರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ನೀಟ್ (NEET) ಪರೀಕ್ಷೆಯ ಗೊಂದಲ ಮತ್ತು ಮರುಪರೀಕ್ಷೆಯ ಆತಂಕದಿಂದ ಈಗಾಗಲೇ ವಿದ್ಯಾರ್ಥಿಗಳು ಒತ್ತಡದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಶುಲ್ಕ ಏರಿಕೆ ಮಾಡುವುದು ಸೂಕ್ತವಲ್ಲ ಎಂಬ ಮಾನವೀಯ ದೃಷ್ಟಿಕೋನದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಶುಲ್ಕ ಹೆಚ್ಚಳದ ಪ್ರಸ್ತಾವನೆಯನ್ನು ತಿರಸ್ಕರಿಸುವ ಮೂಲಕ, ಪೋಷಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದೆಂದು ಮನವಿ ಮಾಡಿದ್ದಾರೆ.

​ಈ ನಿರ್ಧಾರವು ಆರ್ಥಿಕವಾಗಿ ಮಧ್ಯಮ ಮತ್ತು ಕೆಳವರ್ಗದ ಕುಟುಂಬಗಳಿಂದ ಬರುವ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕನಸನ್ನು ನನಸಾಗಿಸಿಕೊಳ್ಳಲು ದೊಡ್ಡ ಮಟ್ಟದ ನೆರವಾಗಲಿದೆ.

ಸರಕಾರದ ಗ್ಯಾರಂಟಿ ಯೋಜನೆಗಳು ಪರಿಷ್ಕರಣೆಯಿಂದ ರದ್ದಾಗಲಿವೆ. – ಮಾಜಿ ಸಚಿವ ಬಿ. ಶ್ರೀರಾಮುಲು

ರಾಜ್ಯ ಬಿಜೆಪಿ ಕಾರ್ಯಲಯ, ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾಜಿ ಸಚಿವ ಬಿ ಶ್ರೀರಾಮುಲು ಸಭೆ ನಡೆಸಿದರು. ಗ್ಯಾರಂಟಿ ಯೋಜನೆಗಳೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರದ ಬಗ್ಗೆ ಅಸಮಾಧಾನ ಹೊರಹಾಕಿ ಮಾತನಾಡುತ್ತಿದ್ದರು.

ರಾಜ್ಯ ಸರ್ಕಾರ ಅಧಿಕಾರಕ್ಕೆ ಬರಲು ಸುಳ್ಳು ಭರವಸೆ ನೀಡಿ ಗ್ಯಾರಂಟಿಗಳನ್ನು ಘೋಷಿಸಿತ್ತು. ಈಗ ಅವುಗಳನ್ನು ಪರಿಷ್ಕರಣೆ ಅಥವಾ ಸ್ಥಗಿತಗೊಳಿಸುವ ಹುನ್ನಾರ ನಡೆಸುತ್ತಿದೆ. ಜನರು ಕೇಳದಿದ್ದರೂ ರಾಜಕೀಯ ಸ್ವಾರ್ಥಕ್ಕಾಗಿ ಈ ಯೋಜನೆಗಳನ್ನು ಜಾರಿಗೊಳಿಸಿ, ಇದೀಗ ಅವ್ಯವಸ್ಥೆಯಿಂದಾಗಿ ಅವುಗಳನ್ನು ನಿಲ್ಲಿಸಲು ಮುಂದಾಗಿದೆ. ಸರ್ಕಾರ ಕೂಡಲೇ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಗೃಹಲಕ್ಷ್ಮಿ ಯೋಜನೆಯ ಹಣ ಮೃತ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗುತ್ತಿರುವುದು ಸೇರಿದಂತೆ ಹಲವು ಲೋಪಗಳು ನಡೆದಿವೆ. ಈ ಯೋಜನೆಯಲ್ಲಿ ಅಕ್ರಮಗಳು ನಡೆಯುತ್ತಿರುವುದನ್ನು ಸರ್ಕಾರವೇ ಸದನದಲ್ಲಿ ಒಪ್ಪಿಕೊಂಡಿದೆ ಎಂದು ದೂರಿದರು.

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ನಡುವೆ ಶೀತಲ ಸಮರ ನಡೆಯುತ್ತಿತ್ತು. ಈಗ ಶಿವಕುಮಾರ್ ಅವರು ಸಿಎಂ ಆದ ನಂತರ ಸಚಿವ ಸಂಪುಟಕ್ಕಾಗಿ ಕಚ್ಚಾಟ ಆರಂಭವಾಯಿತು. ಸರ್ಕಾರವು ರಾಹುಲ್ ಗಾಂಧಿ ಅವರ ಮೇಲೆಯೇ ನಿಂತಿದ್ದು, ಸಚಿವರ ನಡುವೆ ಖಾತೆಗಳ ಹಂಚಿಕೆಯ ವಿಷಯದಲ್ಲಿ ಭಿನ್ನಾಭಿಪ್ರಾಯ ಮತ್ತು ಕಚ್ಚಾಟಗಳು ಹೆಚ್ಚಾಗಿವೆ ಎಂದು ಆರೋಪಿಸಿದರು.

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಷಡ್ಯಂತ್ರ ಮತ್ತು ಹಿಂದೂ ಧಾರ್ಮಿಕ ಸ್ಥಳಗಳಿಗೆ ತೊಂದರೆ ನೀಡುವ ಪ್ರಯತ್ನದ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಸಮರ್ಪಣಾ ಯಾತ್ರೆಯ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಕಚ್ಚಿದ ಸೇಬನ್ನು ಜನರಿಗೆ ಎಸೆದಿದ್ದನ್ನು ಪ್ರಸ್ತಾಪಿಸಿ, ಇದು ಜನರಿಗೆ ಅಗೌರವ ತೋರುವಂತಹ ಕೃತ್ಯ ಎಂದು ಟೀಕಿಸಿದರು.

​ಒಟ್ಟಾರೆಯಾಗಿ, ರಾಜ್ಯ ಸರ್ಕಾರವು ಗ್ಯಾರಂಟಿಗಳನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಮತ್ತು ಸರ್ಕಾರದ ಆಂತರಿಕ ಕಲಹದಿಂದಾಗಿ ರಾಜ್ಯದ ಆಡಳಿತ ಹದಗೆಟ್ಟಿದೆ ಎಂದು ಶ್ರೀರಾಮುಲು ಅವರು ಟೀಕಿಸಿದ್ದಾರೆ.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಝಾಕೀರ್ ಸವಣೂರು : ಹೈಕೋರ್ಟ್ ನಿಂದ ಮಧ್ಯಂತರ ಜಾಮೀನು

ಬೆಳ್ಳಾರೆ ಮಾಸ್ತಿಕಟ್ಟೆಯಲ್ಲಿ 2022 ಜುಲೈ 26 ರಂದು ಪ್ರವೀಣ್ ನೆಟ್ಟಾರು ಅವರನ್ನು ಮಾರಕಾಸ್ತ್ರಗಳಿಂದ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದರು. ಪ್ರವೀಣ್ ನೆಟ್ಟಾರು ಅವರು ಬೆಳ್ಳಾರೆಯಲ್ಲಿ ಅಕ್ಷಯ ಚಿಕನ್ ಸೆಂಟರ್ ನಡೆಸುತ್ತಿದ್ದರು. ಆ ಅಂಗಡಿಯ ಎದುರೇ ಕೊಲೆ ನಡೆದಿತ್ತು. ಅದರಲ್ಲಿ 26 ಮಂದಿಯನ್ನು ಎನ್ ಐ ಎ ಅಧಿಕಾರಿಗಳು ಬಂಧಿಸಿದ್ದರು. ಅದರಲ್ಲಿ ಈಗ 18 ನೆ ಆರೋಪಿ ಝಾಕೀರ್ ಸವಣೂರು (35) ಗೆ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ.

ಈ ಹಿಂದೆ ಸೋಮವಾರಪೇಟೆಯ ಎಚ್. ವೈ ರಿಯಾಜ್ ಎಂಬಾತನಿಗೆ ಜಾಮೀನು ಸಿಕ್ಕಿತ್ತು. ಇವನು ಆರೋಪಿಗಳಿಗೆ ಆಶ್ರಯ ನೀಡಿದ್ದ ಎಂಬ ಕಾರಣಕ್ಕೆ ಬಂಧಿಸಲಾಗಿತ್ತು. ಎಚ್. ವೈ ರಿಯಾಜ್ ಪ್ರಕರಣದ 26 ನೇ ಆರೋಪಿಯಾಗಿದ್ದಾನೆ.

ಈಗ ಜಾಮೀನು ಪಡೆದಿರುವ ಆರೋಪಿ ಝಾಕೀರ್ ಸವಣೂರು (35) ಹತ್ಯೆ ಸಂಚಿನಲ್ಲಿ ನೇರವಾಗಿ ಭಾಗಿಯಾದವರಲ್ಲಿ ಒಬ್ಬನಾಗಿದ್ದು, ಪ್ರಕರಣದ ಆರಂಭದಲ್ಲೇ ಬಂಧಿಸಲ್ಪಟ್ಟಿದ್ದಾನೆ. ಈತನನ್ನು ಬೆಳ್ಳಾರೆಯ ಶಫೀಕ್ ಎಂಬಾತನೊಂದಿಗೆ ಜುಲೈ 28 ರಂದು ವಶಕ್ಕೆ ಪಡೆದಿದ್ದರು.

ಇಂದು ಕರ್ನಾಟಕಕ್ಕೆ ಭೇಟಿ ನೀಡಲಿರುವ ತಮಿಳುನಾಡಿನ ಮುಖ್ಯಮಂತ್ರಿ : ಕೊಲ್ಲೂರಿನಲ್ಲಿ ಬಿಗಿ ಭದ್ರತೆ

ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಅವರಿಗೆ ಪ್ರತಿಭಟನೆಯ ಬಿಸಿ ಎದುರಾಗಿದ್ದು, ದೇವಸ್ಥಾನದ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ಪ್ರಕಾರ, ಜಿಲ್ಲಾ ಪೊಲೀಸರು ಸಂಪೂರ್ಣ ಬಂದೋಬಸ್ತ್ ಒದಗಿಸಿದ್ದಾರೆ. ತಮಿಳುನಾಡಿನ ಡಿಐಜಿ ಮತ್ತು ಎಸ್ಪಿ ಸೇರಿದಂತೆ ಸುಮಾರು 40 ಮಂದಿ ಸಿಎಂ ಅವರ ಭದ್ರತಾ ತಂಡದಲ್ಲಿದ್ದಾರೆ.ಸಿಎಂ ಅವರಿಗೆ ‘ಝಡ್ ಪ್ಲಸ್’ ಭದ್ರತೆ ಇರುವುದರಿಂದ ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದ್ದು, ಪೂರ್ವಭ್ಯಾಸವನ್ನೂ ನಡೆಸಲಾಗಿದೆ.

ಸಿಎಂ ಯಾವುದೇ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುತ್ತಿಲ್ಲ, ಆದರೂ ಅವರು ಸಂಚರಿಸುವ ಮಾರ್ಗ ಹಾಗೂ ದೇವಸ್ಥಾನದ ಸುತ್ತಮುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಭಕ್ತರಿಗೆ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧವಿಲ್ಲ, ಆದರೆ ಸಿಎಂ ಭೇಟಿಯ ಕಾರಣದಿಂದ ದರ್ಶನಕ್ಕೆ ಸ್ವಲ್ಪ ಅನಾನುಕೂಲವಾಗಬಹುದು. ವಿವಿಐಪಿ ವಾಹನ ಸಂಚಾರದ ಹಾದಿಯಲ್ಲಿ ಅಥವಾ ದೇವಸ್ಥಾನದ ಆವರಣದಲ್ಲಿ ಜನರು ಗುಂಪು ಸೇರದಂತೆ ಸೂಚಿಸಲಾಗಿದೆ.