ಬೆಳಗಾವಿಯಲ್ಲಿ ದಾರುಣ ಘಟನೆ: ಮಾಜಿ ಯೋಧನ ಕೊಲೆ, ಮಗಳ ಕೃತ್ಯಕ್ಕೆ ತಾಯಿ ಆತ್ಮಹತ್ಯೆ

​ಬೆಳಗಾವಿಯಲ್ಲಿ ನಡೆದ ಮಾಜಿ ಸೈನಿಕ ಸಂದೀಪ್ ಮಂಜರಗಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ದುರಂತ ಘಟನೆ ಸಂಭವಿಸಿದೆ. ತನ್ನ ಮಗಳು ಸುಮಾ ಮಂಜರಗಿ, ಎರಡು ಕೋಟಿ ರೂಪಾಯಿ ವಿಮೆ ಹಣಕ್ಕಾಗಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿದ್ದ ಕೃತ್ಯದಿಂದ ತೀವ್ರ ಮನನೊಂದಿದ್ದ ಆಕೆಯ ತಾಯಿ ಮಹಾದೇವಿ (57), ಶನಿವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

​ಮಗಳು ಮಾಡಿರುವ ಹೀನಾಯ ಕೃತ್ಯ ಹಾಗೂ ಆಕೆಯ ಬಂಧನದಿಂದ ಕಂಗಾಲಾಗಿದ್ದ ಮಹಾದೇವಿ ಅವರು, ಸಮಾಜದಲ್ಲಿನ ಮರ್ಯಾದೆಗೆ ಅಂಜಿ ಮತ್ತು ತೀವ್ರ ಮಾನಸಿಕ ಆಘಾತದಿಂದ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರಕರಣದ ಹಿನ್ನೆಲೆ:

ಮಾಜಿ ಯೋಧ ಸಂದೀಪ್ ಮಂಜರಗಿ ಅವರ ಹೆಸರಿನಲ್ಲಿದ್ದ ಎಚ್‌ಡಿಎಫ್‌ಸಿ (HDFC) ಮತ್ತು ಎಸ್‌ಬಿಐ (SBI) ವಿಮಾ ಪಾಲಿಸಿಗಳ ಮೇಲೆ ಕಣ್ಣಿಟ್ಟಿದ್ದ ಪತ್ನಿ ಸುಮಾ, ಅಪಘಾತದ ನೆಪದಲ್ಲಿ ಆತನನ್ನು ಕೊಲ್ಲಲು ಸಂಚು ರೂಪಿಸಿದ್ದಳು. ಪತಿ ಮೃತಪಟ್ಟರೆ ಸಿಗುವ ಎರಡು ಕೋಟಿ ರೂಪಾಯಿಗಳ ಆಸೆಗಾಗಿ, ಪ್ರಿಯಕರ ಮತ್ತು ಇತರರ ಸಹಾಯದಿಂದ ಈ ಕೃತ್ಯ ಎಸಗಿದ್ದಳು.

​ಆರಂಭದಲ್ಲಿ ಈ ಸಾವನ್ನು ಅಪಘಾತ ಎಂದು ನಂಬಿಸಲು ಆರೋಪಿಗಳು ಪ್ರಯತ್ನಿಸಿದ್ದರು. ಆದರೆ, ತನಿಖೆ ನಡೆಸಿದ ಪೊಲೀಸರು ಪ್ರಕರಣದ ನಿಗೂಢತೆಯನ್ನು ಭೇದಿಸಿ, ಸುಮಾಳನ್ನು ಆಕೆಯ ಪ್ರಿಯಕರ ಮತ್ತು ಕೆಲ ಸರ್ಕಾರಿ ನೌಕರರು ಸೇರಿದಂತೆ ಒಟ್ಟು 9 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಇದೀಗ ಈ ಪ್ರಕರಣವು ತಾಯಿಯ ಆತ್ಮಹತ್ಯೆಯೊಂದಿಗೆ ಮತ್ತೊಂದು ದುರಂತಕ್ಕೆ ಸಾಕ್ಷಿಯಾಗಿದೆ.

ಬೆಂಗಳೂರು : ಮೆಟ್ರೋ ನಿಲ್ದಾಣದಲ್ಲಿ ಅಗ್ನಿ ಅವಘಡ

ಬೆಂಗಳೂರಿನ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಶನಿವಾರ ಅಗ್ನಿ ಅವಘಡ ಸಂಭವಿಸಿದ ಪರಿಣಾಮ, ಮೆಟ್ರೋ ರೈಲುಗಳ ಸಂಚಾರದಲ್ಲಿ ಕೆಲಕಾಲ ವ್ಯತ್ಯಯ ಉಂಟಾಯಿತು. ಹಸಿರು ಮಾರ್ಗದಲ್ಲಿರುವ ನಾಗಸಂದ್ರ ನಿಲ್ದಾಣದ ಒಂದು ಭಾಗದಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಎಚ್ಚೆತ್ತ ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಮತ್ತು ಮೆಟ್ರೋ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದರು. ಈ ಘಟನೆಯಿಂದಾಗಿ ಸುರಕ್ಷತೆಯ ದೃಷ್ಟಿಯಿಂದ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಪ್ರಯಾಣಿಕರು ಪರದಾಡುವಂತಾಯಿತು.

​ಸದ್ಯಕ್ಕೆ ಈ ಅವಘಡಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲವಾದರೂ, ತಾಂತ್ರಿಕ ದೋಷ ಅಥವಾ ಶಾರ್ಟ್ ಸರ್ಕ್ಯೂಟ್ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಅಧಿಕಾರಿಗಳು ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ತನಿಖೆ ಮುಂದುವರಿಸಿದ್ದಾರೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಹಾನಿ ಅಥವಾ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ. ಈ ವಿಷಯದ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮವು ಶೀಘ್ರವೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಲಿದೆ.

ಕೊಡಗಿನಲ್ಲಿ ತಾಯಿ-ಮಗು ಮತಾಂತರ : ಲವ್ ಜಿಹಾದ್ ಹಾಗೂ ಮತಾಂತರದ ದೊಡ್ಡ ಸಂಚು

ಕೊಡಗಿನ ಕುಶಾಲನಗರದಿಂದ ಒಂದೂವರೆ ತಿಂಗಳ ಹಿಂದೆ ನಾಪತ್ತೆಯಾಗಿದ್ದ ಸಚಿತಾ ಮತ್ತು ಅವರ 9 ವರ್ಷದ ಮಗು ಕೇರಳದ ಮಲಪ್ಪುರಂ ಜಿಲ್ಲೆಯ ಮದರಸವೊಂದರಲ್ಲಿ ಪತ್ತೆಯಾಗಿದ್ದಾರೆ. ಸಚಿತಾ ಕೆಲಸ ಮಾಡುತ್ತಿದ್ದ ಅಂಗಡಿಯ ಮಾಲೀಕ ಸಲೀಂ ಎಂಬಾತನ ಪ್ರಭಾವದಿಂದ ಈಕೆ ಮಗುವಿನೊಂದಿಗೆ ಕೇರಳಕ್ಕೆ ಹೋಗಿದ್ದು, ಅಲ್ಲಿ ಧರ್ಮ ಬದಲಾಯಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಮಗುವಿಗೂ ಮತಾಂತರ ಮಾಡಲಾಗಿದೆ ಎಂದು ವರದಿಯಾಗಿದೆ.

ಈ ಪ್ರಕರಣದ ಹಿಂದೆ ಮತಾಂತರ ಮತ್ತು ‘ಲವ್ ಜಿಹಾದ್’ ಸಂಚು ಇರುವುದಾಗಿ ಹಿಂದೂಪರ ಸಂಘಟನೆಗಳು ಆರೋಪಿಸಿವೆ. ಪತ್ನಿ ಹಾಗೂ ಮಗು ಕಾಣೆಯಾಗಿದ್ದ ಬಳಿಕ ಮಹಿಳೆಯ ಪತಿ ಸಾಕಷ್ಟು ಹುಡುಕಾಟ ನಡೆಸಿದ್ದರು. ನಂತರ ಪತ್ನಿ ಕೆಲಸ ಮಾಡುತ್ತಿದ್ದ ಅಂಗಡಿ ಮೇಲೆ ಅನುಮಾನ ವ್ಯಕ್ತಪಡಿಸಿ, ಹಿಂದೂಪರ ಸಂಘಟನೆಗಳ ಸಹಕಾರದೊಂದಿಗೆ ಕುಶಾಲನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲೀಂ ಮತ್ತು ಜಲೀಲ್ ಎಂಬುವರನ್ನು ಪೊಲೀಸರು ಬಂಧಿಸಿದ್ದು, ಸಮಗ್ರ ತನಿಖೆಯನ್ನು ನಡೆಸುತ್ತಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆ ನಾಳೆ ನೀಟ್ ಯುಜಿ ಮರುಪರೀಕ್ಷೆ

ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ನಾಳೆ ನಡೆಯಲಿರುವ ನೀಟ್-ಯುಜಿ ಮರುಪರೀಕ್ಷೆಯನ್ನು ಅತ್ಯಂತ ಸುರಕ್ಷಿತವಾಗಿ ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಂಡಿದೆ.

  • ಅಣುಕು ಕಾರ್ಯಾಚರಣೆ (Mock Drill): ಇಂದು ದೇಶಾದ್ಯಂತ 551 ನಗರಗಳಲ್ಲಿ ಬೆಳಗ್ಗೆ 9 ರಿಂದ ರಾತ್ರಿ 8 ಗಂಟೆಯವರೆಗೆ ಪರೀಕ್ಷೆಯ ಸಂಪೂರ್ಣ ಪ್ರಕ್ರಿಯೆಗಳಾದ ಪ್ರಶ್ನೆಪತ್ರಿಕೆ ವಿತರಣೆ, ಸಂಗ್ರಹ ಮತ್ತು ಸಾಗಣೆಯ ಅಣುಕು ಕಾರ್ಯಾಚರಣೆ ನಡೆಯುತ್ತಿದೆ.
  • ತ್ರಿ-ಹಂತದ ಭದ್ರತೆ: ನಾಳೆ ನಡೆಯುವ ಪರೀಕ್ಷೆಗಾಗಿ ದೇಶದ 5,500ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಜಿಲ್ಲಾಡಳಿತ, ರಾಜ್ಯ ಪೊಲೀಸ್ ಪಡೆ ಮತ್ತು ಕೇಂದ್ರದ ವಿಶೇಷ ತಂಡಗಳಿಂದ ಮೂರು ಹಂತದ ಬಿಗಿ ಭದ್ರತೆ ಕಲ್ಪಿಸಲಾಗಿದೆ.
  • ಭದ್ರತಾ ಸಿಬ್ಬಂದಿ: ಸುಮಾರು 2.5 ಲಕ್ಷ ಪೊಲೀಸರು ಮತ್ತು 15,000 ಅರೆಸೇನಾ ಸಿಬ್ಬಂದಿಯನ್ನು ಭದ್ರತೆ ಹಾಗೂ ಪ್ರಶ್ನೆಪತ್ರಿಕೆಗಳ ಸುರಕ್ಷಿತ ಸಾಗಣೆಗೆ ನಿಯೋಜಿಸಲಾಗಿದೆ.
  • ತಾಂತ್ರಿಕ ನಿಗಾ: ಪರೀಕ್ಷಾ ಕೇಂದ್ರಗಳಲ್ಲಿ 1.5 ಲಕ್ಷ ಸಿಸಿಟಿವಿ ಕ್ಯಾಮೆರಾಗಳು ಮತ್ತು 15,000 ಸಿಗ್ನಲ್ ಜಾಮರ್‌ಗಳನ್ನು ಅಳವಡಿಸಲಾಗಿದ್ದು, ಎನ್‌ಟಿಎ ಕಚೇರಿಯಿಂದ ನೈಜ ಸಮಯದ (Real-time) ಮೇಲ್ವಿಚಾರಣೆ ನಡೆಸಲಾಗುತ್ತದೆ.

ಭಟ್ಕಳದಲ್ಲಿ ಪ್ರತಿಭಟನೆ ವೇಳೆ ಪ್ರಚೋದನಕಾರಿ ಭಾಷಣ ಆರೋಪ : ಹಿಂದೂ ಸಂಘಟನೆಯ ಮುಖಂಡರ ವಿರುದ್ಧ ದೂರು

ಭಟ್ಕಳದಲ್ಲಿ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕಾಗಿ ಹಿಂದೂ ಸಂಘಟನೆಯ ಮುಖಂಡ ಗೋವಿಂದ ನಾಯ್ಕ್ ವಿರುದ್ಧ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಘಟನೆಯು ಸಾಗರ ರಸ್ತೆಯ ಕಸ ವಿಲೇವಾರಿ ಘಟಕದ ಬಳಿ ನಡೆದ ಘಟನೆಯನ್ನು ವಿರೋಧಿಸಿ, ಕಾರ್ಯಕರ್ತರು ಭಟ್ಕಳ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದರು. ಹಿಂದೂ ಕಾರ್ಯಕರ್ತರಾದ ಶ್ರೀಕಾಂತ ನಾಯ್ಕ್ ಮತ್ತು ಕುಮಾರ್ ನಾಯ್ಕ್ ಅವರ ವಿರುದ್ಧ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ನಡೆದಿದೆ.
​ ಈ ಪ್ರತಿಭಟನೆಯಲ್ಲಿ ಗೋವಿಂದ ನಾಯ್ಕ್ ಪೊಲೀಸ್ ಇಲಾಖೆಯ ಕಾರ್ಯವೈಖರಿಯನ್ನು ಟೀಕಿಸಿ, ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮತ್ತು ಸಮಾಜದಲ್ಲಿ ಅಶಾಂತಿ ಉಂಟುಮಾಡುವಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವುದರಿಂದ, ಭಟ್ಕಳದಂತಹ ಸೂಕ್ಷ್ಮ ಪ್ರದೇಶದಲ್ಲಿ ಎರಡು ಸಮುದಾಯಗಳ ನಡುವೆ ಉದ್ವಿಗ್ನತೆ ಉಂಟಾಗಬಹುದು ಎಂಬ ಕಾರಣಕ್ಕೆ ಪೊಲೀಸರು ಈ ಪ್ರಕರಣ ದಾಖಲಿಸಿದ್ದಾರೆ. . ಭಟ್ಕಳ ಗ್ರಾಮೀಣ ಠಾಣೆಯ ಪಿಐ ವೆಂಕಟೇಶ್ ಮುರನಾಳ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ ಹುಸಿ ಬಾಂಬ್ ಕರೆ

​ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ ಬಂದಿದ್ದ ಬಾಂಬ್ ಬೆದರಿಕೆ ಸಂದೇಶವು ಹುಸಿ (ನಕಲಿ) ಬೆದರಿಕೆ ಎಂದು ದೃಢಪಟ್ಟಿತು. ಇದರಿಂದ ಕೋರ್ಟ್ ನ ಸಿಬ್ಬಂದಿಗಳು ಹಾಗೂ ವಕೀಲರು ನಿರಾಳರಾದರು.
‘Kurunanidhi.kundi@underworld dog’ ಎಂಬ ಇಮೇಲ್ ವಿಳಾಸದಿಂದ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು.


​ ಇಮೇಲ್ ಬಗ್ಗೆ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ, ನ್ಯಾಯಾಲಯದ ಸಿಬ್ಬಂದಿ ಮತ್ತು ವಕೀಲರನ್ನು ಹೊರಗೆ ಕಳುಹಿಸಿ ಸುರಕ್ಷತಾ ಕ್ರಮ ಕೈಗೊಂಡರು. ನ್ಯಾಯಾಲಯದ ಕಲಾಪಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
​ ಬಾಂಬ್ ನಿಷ್ಕ್ರಿಯ ದಳವು ಸ್ಥಳದಲ್ಲಿ ಸಂಪೂರ್ಣ ಪರಿಶೀಲನೆ ನಡೆಸಿತು. ಯಾವುದೇ ಸ್ಫೋಟಕಗಳು ಪತ್ತೆಯಾಗದ ಕಾರಣ, ಇದು ಹುಸಿ ಬೆದರಿಕೆ ಎಂದು ಖಚಿತವಾಯಿತು.
ವಿಷಯ ಸ್ಪಷ್ಟವಾದ ನಂತರ, ನ್ಯಾಯಾಲಯದ ಸಿಬ್ಬಂದಿ ಮತ್ತು ವಕೀಲರು ಮತ್ತೆ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಯಿತು.

ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲು: ಜೂನ್ ಅಂತ್ಯಕ್ಕೆ ಘಾಟ್ ವಿಭಾಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭ

ಬೆಂಗಳೂರು ಮತ್ತು ಮಂಗಳೂರು ನಡುವಿನ ವಂದೇ ಭಾರತ್ ರೈಲು ಸಂಪರ್ಕಕ್ಕೆ ಇದ್ದ ತಾಂತ್ರಿಕ ಅಡಚಣೆಗಳು ನಿವಾರಣೆಯಾಗುತ್ತಿವೆ. ಇದರಿಂದಾಗಿ ಕರಾವಳಿ ಹಾಗೂ ರಾಜ್ಯ ರಾಜಧಾನಿಗೆ ಇರುವ ಹೈಸ್ಪೀಡ್ ರೈಲು ಸಂಪರ್ಕದ ಕನಸು ನನಸಾಗಲಿದೆ. ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆಯ ಸವಾಲಿನ 55 ಕಿಮೀ ಘಾಟ್ ವಿಭಾಗದಲ್ಲಿ ಜೂನ್ ಅಂತ್ಯದೊಳಗೆ ಪ್ರಾಯೋಗಿಕ ಸಂಚಾರ (Trial Run) ನಡೆಯಲಿದೆ.
ಘಾಟಿ ವಿಭಾಗದಲ್ಲಿ ರೈಲಿನ ವೇಗವನ್ನು ಗಂಟೆಗೆ 30 ಕಿ.ಮೀಗೆ ಸೀಮಿತಗೊಳಿಸಿರುವುದರಿಂದ, ಸುರಕ್ಷತೆಗಾಗಿ ವಂದೇ ಭಾರತ್ ರೈಲಿಗೆ ‘ಸ್ವಯಂಚಾಲಿತ ತುರ್ತು ಬ್ರೇಕಿಂಗ್’ (AEB) ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಈ ವಿಶೇಷ ರೇಕ್ ಸಿದ್ಧವಾಗಿದ್ದು, ಶೀಘ್ರವೇ ಕರ್ನಾಟಕಕ್ಕೆ ಆಗಮಿಸಲಿದೆ.


ರೈಲ್ವೆ ಸಚಿವಾಲಯದ ಆರ್‌ಡಿಎಸ್‌ಒ (RDSO) ಈ ಪರೀಕ್ಷೆಯನ್ನು ನಡೆಸಲಿದೆ. ಈ ಪರೀಕ್ಷೆ ಯಶಸ್ವಿಯಾದರೆ ಬೆಂಗಳೂರು-ಮಂಗಳೂರು ನಡುವಿನ ವೇಗದ ಮತ್ತು ಆರಾಮದಾಯಕ ರೈಲು ಸಂಚಾರಕ್ಕೆ ಹಸಿರು ನಿಶಾನೆ ಸಿಗಲಿದೆ.
​ ಈ ಮಾರ್ಗದ ವಿದ್ಯುದೀಕರಣ ಕಾರ್ಯವು ಈಗಾಗಲೇ ಡಿಸೆಂಬರ್ 2025ರಲ್ಲಿ ಪೂರ್ಣಗೊಂಡಿದ್ದು, ವಂದೇ ಭಾರತ್ ರೈಲಿನ ಪ್ರಾಯೋಗಿಕ ಪರೀಕ್ಷೆ ಬಾಕಿ ಇದೆ. ಇದಕ್ಕಾಗಿ ಎಇಬಿ ವ್ಯವಸ್ಥೆ ಹೊಂದಿರುವ ವಿಶೇಷ ರೇಕ್ ಸಿದ್ಧವಾಗುತ್ತಿದೆ ಜೂನ್ ಎರಡನೇ ವಾರದಿಂದ ಆರಂಭವಾದ ಈ ಪರೀಕ್ಷೆಗಳಲ್ಲಿ 5 ದಿನಗಳ 5 ಟ್ರಿಪ್‌ಗಳನ್ನು ನಡೆಸಲಾಗಿದ್ದು, ಎಲ್ಲಾ ತಾಂತ್ರಿಕ ಮಾನದಂಡಗಳನ್ನು ಪೂರೈಸಲಾಗಿದೆ. ಪ್ರಾಯೋಗಿಕ ಸಂಚಾರಗಳ ನಂತರ ಕರಾವಳಿಯ ಜನರಿಗೆ ವಂದೇ ಭಾರತ್ ರೈಲಿನ ಸೇವೆ ದೊರೆಯುವ ನಿರೀಕ್ಷೆಯಿದೆ.
​ ಈ ರೈಲು ಮಾರ್ಗವು ಆರಂಭವಾದರೆ ಕರಾವಳಿ ಕರ್ನಾಟಕ ಮತ್ತು ರಾಜಧಾನಿ ಬೆಂಗಳೂರಿನ ನಡುವಿನ ಸಂಪರ್ಕ ಇನ್ನಷ್ಟು ಸುಗಮವಾಗಲಿದೆ

ಹೊಮ್ ಸ್ಟೇಗಳಿಗೆ ಶಾಸನಬದ್ಧ ನೀತಿ ರೂಪಿಸಬೇಕು : ಹೈಕೋರ್ಟ್ ಸೂಚನೆ

ಕರ್ನಾಟಕದ ಹಲವೆಡೆಗಳಲ್ಲಿ ಹೋಂಸ್ಟೇಗಳ ಸ್ಥಾಪನೆ, ನಿರ್ವಹಣೆ ಮತ್ತು ಮೇಲ್ವಿಚಾರಣೆಗಾಗಿ ಸಮಗ್ರ ನೀತಿ ಹಾಗೂ ಶಾಸನಬದ್ಧ ನಿಯಂತ್ರಣ ಚೌಕಟ್ಟನ್ನು ರೂಪಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಹೋಂಸ್ಟೇಗಳು ಕೇವಲ ವಾಣಿಜ್ಯ ಸಂಸ್ಥೆಗಳಲ್ಲದೆ, ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ಸ್ಥಳಗಳಾಗಿರುವುದರಿಂದ ಅಲ್ಲಿನ ಸುರಕ್ಷತೆ, ಶುಚಿತ್ವ ಮತ್ತು ಗ್ರಾಹಕ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಜೊತೆಗೆ, ಸಣ್ಣ ಮತ್ತು ದೊಡ್ಡ ಹೋಂಸ್ಟೇಗಳ ನಡುವೆ ಸ್ಪಷ್ಟ ವರ್ಗೀಕರಣ ಮಾಡಬೇಕೆಂದು ಹಾಗೂ ಅಗ್ನಿ ಸುರಕ್ಷತೆ, ಆಹಾರ ಸ್ವಚ್ಛತೆ ಸೇರಿದಂತೆ ಹಲವು ಮಾನದಂಡಗಳನ್ನು ರೂಪಿಸುವಂತೆ ಸೂಚಿಸಿದೆ. ಹೋಮ್ ಸ್ಟೇ ಪರವಾನಗಿ ರದ್ದು ಮಾಡುವ ಮೊದಲು ಅರ್ಜಿದಾರರಿಗೆ ನೋಟೀಸ್ ನೀಡುವುದು ಅಗತ್ಯವಾಗಿದೆ. ಇಲ್ಲದಿದ್ದರೆ ಅದನ್ನು ಶೋಕಾಸ್ ನೋಟೀಸ್ ಎಂದು ಪರಿಗಣಿಸಿ ಉತ್ತರಿಸಲು ಅವಕಾಶ ನೀಡಲಾಗುವುದು.

ತಮಿಳುನಾಡು :ಹೊಸ ಸರಕಾರದಿಂದ ಮತ್ತೆ ಮೇಕೆದಾಟು ಕಿರಿಕಿರಿ

ತಮಿಳುನಾಡಿನ ವಿಜಯ್ ನೇತೃತ್ವದ ಹೊಸ ಸರ್ಕಾರವು ಕರ್ನಾಟಕದ ಮೇಕೆದಾಟು ಯೋಜನೆಯನ್ನು ವಿರೋಧಿಸಲು ಎಲ್ಲಾ ಕಾನೂನು ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ.


​ತಮಿಳುನಾಡಿನ ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ್ ಆಳೇಕರ್ ಅವರು, ಕಾವೇರಿ ನದಿ ತಮಿಳುನಾಡಿನ ರೈತರ ಜೀವನಾಡಿಯಾಗಿದ್ದು, ಕರ್ನಾಟಕದ ಯೋಜನೆಯು ರೈತರಿಗೆ ತೊಂದರೆ ಉಂಟುಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
​ ಅದೇ ಸಮಯದಲ್ಲಿ, ಮೇಕೆದಾಟು ಯೋಜನೆಯು ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಅನುಕೂಲಕರವಾಗಿದೆ ಎಂದು ಕರ್ನಾಟಕದ ದೃಷ್ಟಿಕೋನವನ್ನು ವ್ಯಕ್ತಪಡಿಸಲಾಗಿದೆ. ತಮಿಳುನಾಡಿನ ರೈತರ ಹಿತಾಸಕ್ತಿಗೆ ವಿರುದ್ಧವಾದ ಕರ್ನಾಟಕ ಮೇಕೆದಾಟು ಯೋಜನೆಯನ್ನು ಸ್ಥಗಿತಗೊಳಿಸಲು ಕೈಗೊಳ್ಳಬಹುದಾದ ಎಲ್ಲಾ ಕಾನೂನಾತ್ಮಕ ಪ್ರಯತ್ನಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
​ ಕಾವೇರಿ ನದಿ ಪಾತ್ರದ ರೈತರು ಕಾವೇರಿ ನದಿ ನೀರನ್ನು ಬಳಸುವ ಹಕ್ಕು ಹೊಂದಿದ್ದಾರೆಯೆಂದು ಸುಪ್ರೀಂ ಕೋರ್ಟ್ ಹೇಳಿದ್ದರೂ, ಕರ್ನಾಟಕ ಸರ್ಕಾರ ತಮಿಳುನಾಡಿಗೆ ಸಿಗಬೇಕಾದ ಕಾವೇರಿ ನೀರಿನ ಪಾಲನ್ನು ಸರಿಯಾಗಿ ನೀಡದೇ ಕೇವಲ ಹೆಚ್ಚುವರಿ ನೀರನ್ನು ಮಾತ್ರ ಪ್ರತಿ ವರ್ಷ ಹರಿಸುತ್ತದೆ.


ಇದಕ್ಕೆ ಉತ್ತರಿಸಿರುವ ಕರ್ನಾಟಕದ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅವರು ​ಮೇಕೆದಾಟು ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೇ ಹೆಚ್ಚು ಅನುಕೂಲ, ಅವರ ಪಾಲಿನ ನೀರನ್ನು ಅವರಿಗೆ ಕೊಟ್ಟೆ ಕೊಡುತ್ತೇವೆ. ತಮಿಳುನಾಡು, ಕರ್ನಾಟಕದ ಜನರೆಲ್ಲರೂ ಭಾರತೀಯರು. ಹಾಗಾಗಿ ಯಾವಾಗ ಬೇಕಾದರೂ ಮಾತುಕತೆಗೆ ಸಿದ್ಧ… ಎಂದು ಹೇಳಿದರು.

ಬಿಜೆಪಿ ಕುಂಬಳೆ ಪಂಚಾಯತ್ ನ ನೂತನ ಕಟ್ಟಡ ಎಂ.ಎಲ್ ಅಶ್ವಿನಿಯವರಿಂದ ಉದ್ಘಾಟನೆ

ಕುಂಬಳೆಯಲ್ಲಿ ನಡೆದ ಬಿಜೆಪಿ ಪಂಚಾಯತ್ ಸಮಿತಿಯ ನೂತನ ಕಚೇರಿ ಉದ್ಘಾಟನಾ ಸಮಾರಂಭವನ್ನು ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಅವರು ನೆರವೇರಿಸಿದರು. ಕಾರ್ಯಕ್ರಮದ ಉದ್ಘಾಟನೆಗೂ ಮುನ್ನ, ಬಿಜೆಪಿ ರಾಜ್ಯ ಸಮಿತಿ ಸದಸ್ಯ ಮತ್ತು ಹಿರಿಯ ನಾಯಕರಾದ ವಿ. ರವೀಂದ್ರನ್ ಅವರು ಧ್ವಜಾರೋಹಣ ನೆರವೇರಿಸಿದರು. ಕುಂಬಳೆ ಪಂಚಾಯತ್ ದಕ್ಷಿಣ ಕ್ಷೇತ್ರ ಸಮಿತಿಯ ಅಧ್ಯಕ್ಷ ಸುಜಿತ್ ರೈ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

​ಈ ಸಂದರ್ಭದಲ್ಲಿ ಜನಸಂಘ ಮತ್ತು ಬಿಜೆಪಿಯ ಹಿರಿಯ ಹಾಗೂ ಆರಂಭಿಕ ಕಾರ್ಯಕರ್ತರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸತೀಶ್ ಚಂದ್ರ ಭಂಡಾರಿ (ರಾಜ್ಯ ಸಮಿತಿ ಸದಸ್ಯ), ಸುಬ್ಬಯ್ಯ ರೈ (ತುರ್ತು ಹೋರಾಟಗಾರ ಮತ್ತು ಜನಸಂಘದ ಕಾರ್ಯಕರ್ತ), ಮುರಲೀಧರ ಯಾದವ್ (ಜಿಲ್ಲಾ ಉಪಾಧ್ಯಕ್ಷ), ವಸಂತಮಯ್ಯ (ಮಂಡಲ ಪ್ರಧಾನ ಕಾರ್ಯದರ್ಶಿ), ವಿಕ್ರಮ್ ಪೈ ಹಾಗೂ ಪ್ರೇಮಾವತಿ (ಮಂಡಲ ಉಪಾಧ್ಯಕ್ಷರು), ಶಿವಪ್ರಸಾದ್ ರೈ (ಕುಂಬಳೆ ಪಂಚಾಯತ್ ಉತ್ತರ ಕ್ಷೇತ್ರ ಸಮಿತಿ ಅಧ್ಯಕ್ಷ) ಸೇರಿದಂತೆ ಪಂಚಾಯತ್ ಪ್ರತಿನಿಧಿಗಳು, ವಿನೋದ್ ಕೊಯಿಪ್ಪಾಡಿ ಕಡಪರ ಮತ್ತು ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.