ಭಟ್ಕಳದಲ್ಲಿ ಪ್ರತಿಭಟನೆ ವೇಳೆ ಪ್ರಚೋದನಕಾರಿ ಭಾಷಣ ಆರೋಪ : ಹಿಂದೂ ಸಂಘಟನೆಯ ಮುಖಂಡರ ವಿರುದ್ಧ ದೂರು

ಭಟ್ಕಳದಲ್ಲಿ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕಾಗಿ ಹಿಂದೂ ಸಂಘಟನೆಯ ಮುಖಂಡ ಗೋವಿಂದ ನಾಯ್ಕ್ ವಿರುದ್ಧ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಘಟನೆಯು ಸಾಗರ ರಸ್ತೆಯ ಕಸ ವಿಲೇವಾರಿ ಘಟಕದ ಬಳಿ ನಡೆದ ಘಟನೆಯನ್ನು ವಿರೋಧಿಸಿ, ಕಾರ್ಯಕರ್ತರು ಭಟ್ಕಳ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದರು. ಹಿಂದೂ ಕಾರ್ಯಕರ್ತರಾದ ಶ್ರೀಕಾಂತ ನಾಯ್ಕ್ ಮತ್ತು ಕುಮಾರ್ ನಾಯ್ಕ್ ಅವರ ವಿರುದ್ಧ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ನಡೆದಿದೆ.
​ ಈ ಪ್ರತಿಭಟನೆಯಲ್ಲಿ ಗೋವಿಂದ ನಾಯ್ಕ್ ಪೊಲೀಸ್ ಇಲಾಖೆಯ ಕಾರ್ಯವೈಖರಿಯನ್ನು ಟೀಕಿಸಿ, ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮತ್ತು ಸಮಾಜದಲ್ಲಿ ಅಶಾಂತಿ ಉಂಟುಮಾಡುವಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವುದರಿಂದ, ಭಟ್ಕಳದಂತಹ ಸೂಕ್ಷ್ಮ ಪ್ರದೇಶದಲ್ಲಿ ಎರಡು ಸಮುದಾಯಗಳ ನಡುವೆ ಉದ್ವಿಗ್ನತೆ ಉಂಟಾಗಬಹುದು ಎಂಬ ಕಾರಣಕ್ಕೆ ಪೊಲೀಸರು ಈ ಪ್ರಕರಣ ದಾಖಲಿಸಿದ್ದಾರೆ. . ಭಟ್ಕಳ ಗ್ರಾಮೀಣ ಠಾಣೆಯ ಪಿಐ ವೆಂಕಟೇಶ್ ಮುರನಾಳ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ ಹುಸಿ ಬಾಂಬ್ ಕರೆ

​ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ ಬಂದಿದ್ದ ಬಾಂಬ್ ಬೆದರಿಕೆ ಸಂದೇಶವು ಹುಸಿ (ನಕಲಿ) ಬೆದರಿಕೆ ಎಂದು ದೃಢಪಟ್ಟಿತು. ಇದರಿಂದ ಕೋರ್ಟ್ ನ ಸಿಬ್ಬಂದಿಗಳು ಹಾಗೂ ವಕೀಲರು ನಿರಾಳರಾದರು.
‘Kurunanidhi.kundi@underworld dog’ ಎಂಬ ಇಮೇಲ್ ವಿಳಾಸದಿಂದ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು.


​ ಇಮೇಲ್ ಬಗ್ಗೆ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ, ನ್ಯಾಯಾಲಯದ ಸಿಬ್ಬಂದಿ ಮತ್ತು ವಕೀಲರನ್ನು ಹೊರಗೆ ಕಳುಹಿಸಿ ಸುರಕ್ಷತಾ ಕ್ರಮ ಕೈಗೊಂಡರು. ನ್ಯಾಯಾಲಯದ ಕಲಾಪಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
​ ಬಾಂಬ್ ನಿಷ್ಕ್ರಿಯ ದಳವು ಸ್ಥಳದಲ್ಲಿ ಸಂಪೂರ್ಣ ಪರಿಶೀಲನೆ ನಡೆಸಿತು. ಯಾವುದೇ ಸ್ಫೋಟಕಗಳು ಪತ್ತೆಯಾಗದ ಕಾರಣ, ಇದು ಹುಸಿ ಬೆದರಿಕೆ ಎಂದು ಖಚಿತವಾಯಿತು.
ವಿಷಯ ಸ್ಪಷ್ಟವಾದ ನಂತರ, ನ್ಯಾಯಾಲಯದ ಸಿಬ್ಬಂದಿ ಮತ್ತು ವಕೀಲರು ಮತ್ತೆ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಯಿತು.

ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲು: ಜೂನ್ ಅಂತ್ಯಕ್ಕೆ ಘಾಟ್ ವಿಭಾಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭ

ಬೆಂಗಳೂರು ಮತ್ತು ಮಂಗಳೂರು ನಡುವಿನ ವಂದೇ ಭಾರತ್ ರೈಲು ಸಂಪರ್ಕಕ್ಕೆ ಇದ್ದ ತಾಂತ್ರಿಕ ಅಡಚಣೆಗಳು ನಿವಾರಣೆಯಾಗುತ್ತಿವೆ. ಇದರಿಂದಾಗಿ ಕರಾವಳಿ ಹಾಗೂ ರಾಜ್ಯ ರಾಜಧಾನಿಗೆ ಇರುವ ಹೈಸ್ಪೀಡ್ ರೈಲು ಸಂಪರ್ಕದ ಕನಸು ನನಸಾಗಲಿದೆ. ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆಯ ಸವಾಲಿನ 55 ಕಿಮೀ ಘಾಟ್ ವಿಭಾಗದಲ್ಲಿ ಜೂನ್ ಅಂತ್ಯದೊಳಗೆ ಪ್ರಾಯೋಗಿಕ ಸಂಚಾರ (Trial Run) ನಡೆಯಲಿದೆ.
ಘಾಟಿ ವಿಭಾಗದಲ್ಲಿ ರೈಲಿನ ವೇಗವನ್ನು ಗಂಟೆಗೆ 30 ಕಿ.ಮೀಗೆ ಸೀಮಿತಗೊಳಿಸಿರುವುದರಿಂದ, ಸುರಕ್ಷತೆಗಾಗಿ ವಂದೇ ಭಾರತ್ ರೈಲಿಗೆ ‘ಸ್ವಯಂಚಾಲಿತ ತುರ್ತು ಬ್ರೇಕಿಂಗ್’ (AEB) ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಈ ವಿಶೇಷ ರೇಕ್ ಸಿದ್ಧವಾಗಿದ್ದು, ಶೀಘ್ರವೇ ಕರ್ನಾಟಕಕ್ಕೆ ಆಗಮಿಸಲಿದೆ.


ರೈಲ್ವೆ ಸಚಿವಾಲಯದ ಆರ್‌ಡಿಎಸ್‌ಒ (RDSO) ಈ ಪರೀಕ್ಷೆಯನ್ನು ನಡೆಸಲಿದೆ. ಈ ಪರೀಕ್ಷೆ ಯಶಸ್ವಿಯಾದರೆ ಬೆಂಗಳೂರು-ಮಂಗಳೂರು ನಡುವಿನ ವೇಗದ ಮತ್ತು ಆರಾಮದಾಯಕ ರೈಲು ಸಂಚಾರಕ್ಕೆ ಹಸಿರು ನಿಶಾನೆ ಸಿಗಲಿದೆ.
​ ಈ ಮಾರ್ಗದ ವಿದ್ಯುದೀಕರಣ ಕಾರ್ಯವು ಈಗಾಗಲೇ ಡಿಸೆಂಬರ್ 2025ರಲ್ಲಿ ಪೂರ್ಣಗೊಂಡಿದ್ದು, ವಂದೇ ಭಾರತ್ ರೈಲಿನ ಪ್ರಾಯೋಗಿಕ ಪರೀಕ್ಷೆ ಬಾಕಿ ಇದೆ. ಇದಕ್ಕಾಗಿ ಎಇಬಿ ವ್ಯವಸ್ಥೆ ಹೊಂದಿರುವ ವಿಶೇಷ ರೇಕ್ ಸಿದ್ಧವಾಗುತ್ತಿದೆ ಜೂನ್ ಎರಡನೇ ವಾರದಿಂದ ಆರಂಭವಾದ ಈ ಪರೀಕ್ಷೆಗಳಲ್ಲಿ 5 ದಿನಗಳ 5 ಟ್ರಿಪ್‌ಗಳನ್ನು ನಡೆಸಲಾಗಿದ್ದು, ಎಲ್ಲಾ ತಾಂತ್ರಿಕ ಮಾನದಂಡಗಳನ್ನು ಪೂರೈಸಲಾಗಿದೆ. ಪ್ರಾಯೋಗಿಕ ಸಂಚಾರಗಳ ನಂತರ ಕರಾವಳಿಯ ಜನರಿಗೆ ವಂದೇ ಭಾರತ್ ರೈಲಿನ ಸೇವೆ ದೊರೆಯುವ ನಿರೀಕ್ಷೆಯಿದೆ.
​ ಈ ರೈಲು ಮಾರ್ಗವು ಆರಂಭವಾದರೆ ಕರಾವಳಿ ಕರ್ನಾಟಕ ಮತ್ತು ರಾಜಧಾನಿ ಬೆಂಗಳೂರಿನ ನಡುವಿನ ಸಂಪರ್ಕ ಇನ್ನಷ್ಟು ಸುಗಮವಾಗಲಿದೆ

ಹೊಮ್ ಸ್ಟೇಗಳಿಗೆ ಶಾಸನಬದ್ಧ ನೀತಿ ರೂಪಿಸಬೇಕು : ಹೈಕೋರ್ಟ್ ಸೂಚನೆ

ಕರ್ನಾಟಕದ ಹಲವೆಡೆಗಳಲ್ಲಿ ಹೋಂಸ್ಟೇಗಳ ಸ್ಥಾಪನೆ, ನಿರ್ವಹಣೆ ಮತ್ತು ಮೇಲ್ವಿಚಾರಣೆಗಾಗಿ ಸಮಗ್ರ ನೀತಿ ಹಾಗೂ ಶಾಸನಬದ್ಧ ನಿಯಂತ್ರಣ ಚೌಕಟ್ಟನ್ನು ರೂಪಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಹೋಂಸ್ಟೇಗಳು ಕೇವಲ ವಾಣಿಜ್ಯ ಸಂಸ್ಥೆಗಳಲ್ಲದೆ, ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ಸ್ಥಳಗಳಾಗಿರುವುದರಿಂದ ಅಲ್ಲಿನ ಸುರಕ್ಷತೆ, ಶುಚಿತ್ವ ಮತ್ತು ಗ್ರಾಹಕ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಜೊತೆಗೆ, ಸಣ್ಣ ಮತ್ತು ದೊಡ್ಡ ಹೋಂಸ್ಟೇಗಳ ನಡುವೆ ಸ್ಪಷ್ಟ ವರ್ಗೀಕರಣ ಮಾಡಬೇಕೆಂದು ಹಾಗೂ ಅಗ್ನಿ ಸುರಕ್ಷತೆ, ಆಹಾರ ಸ್ವಚ್ಛತೆ ಸೇರಿದಂತೆ ಹಲವು ಮಾನದಂಡಗಳನ್ನು ರೂಪಿಸುವಂತೆ ಸೂಚಿಸಿದೆ. ಹೋಮ್ ಸ್ಟೇ ಪರವಾನಗಿ ರದ್ದು ಮಾಡುವ ಮೊದಲು ಅರ್ಜಿದಾರರಿಗೆ ನೋಟೀಸ್ ನೀಡುವುದು ಅಗತ್ಯವಾಗಿದೆ. ಇಲ್ಲದಿದ್ದರೆ ಅದನ್ನು ಶೋಕಾಸ್ ನೋಟೀಸ್ ಎಂದು ಪರಿಗಣಿಸಿ ಉತ್ತರಿಸಲು ಅವಕಾಶ ನೀಡಲಾಗುವುದು.

ತಮಿಳುನಾಡು :ಹೊಸ ಸರಕಾರದಿಂದ ಮತ್ತೆ ಮೇಕೆದಾಟು ಕಿರಿಕಿರಿ

ತಮಿಳುನಾಡಿನ ವಿಜಯ್ ನೇತೃತ್ವದ ಹೊಸ ಸರ್ಕಾರವು ಕರ್ನಾಟಕದ ಮೇಕೆದಾಟು ಯೋಜನೆಯನ್ನು ವಿರೋಧಿಸಲು ಎಲ್ಲಾ ಕಾನೂನು ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ.


​ತಮಿಳುನಾಡಿನ ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ್ ಆಳೇಕರ್ ಅವರು, ಕಾವೇರಿ ನದಿ ತಮಿಳುನಾಡಿನ ರೈತರ ಜೀವನಾಡಿಯಾಗಿದ್ದು, ಕರ್ನಾಟಕದ ಯೋಜನೆಯು ರೈತರಿಗೆ ತೊಂದರೆ ಉಂಟುಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
​ ಅದೇ ಸಮಯದಲ್ಲಿ, ಮೇಕೆದಾಟು ಯೋಜನೆಯು ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಅನುಕೂಲಕರವಾಗಿದೆ ಎಂದು ಕರ್ನಾಟಕದ ದೃಷ್ಟಿಕೋನವನ್ನು ವ್ಯಕ್ತಪಡಿಸಲಾಗಿದೆ. ತಮಿಳುನಾಡಿನ ರೈತರ ಹಿತಾಸಕ್ತಿಗೆ ವಿರುದ್ಧವಾದ ಕರ್ನಾಟಕ ಮೇಕೆದಾಟು ಯೋಜನೆಯನ್ನು ಸ್ಥಗಿತಗೊಳಿಸಲು ಕೈಗೊಳ್ಳಬಹುದಾದ ಎಲ್ಲಾ ಕಾನೂನಾತ್ಮಕ ಪ್ರಯತ್ನಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
​ ಕಾವೇರಿ ನದಿ ಪಾತ್ರದ ರೈತರು ಕಾವೇರಿ ನದಿ ನೀರನ್ನು ಬಳಸುವ ಹಕ್ಕು ಹೊಂದಿದ್ದಾರೆಯೆಂದು ಸುಪ್ರೀಂ ಕೋರ್ಟ್ ಹೇಳಿದ್ದರೂ, ಕರ್ನಾಟಕ ಸರ್ಕಾರ ತಮಿಳುನಾಡಿಗೆ ಸಿಗಬೇಕಾದ ಕಾವೇರಿ ನೀರಿನ ಪಾಲನ್ನು ಸರಿಯಾಗಿ ನೀಡದೇ ಕೇವಲ ಹೆಚ್ಚುವರಿ ನೀರನ್ನು ಮಾತ್ರ ಪ್ರತಿ ವರ್ಷ ಹರಿಸುತ್ತದೆ.


ಇದಕ್ಕೆ ಉತ್ತರಿಸಿರುವ ಕರ್ನಾಟಕದ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅವರು ​ಮೇಕೆದಾಟು ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೇ ಹೆಚ್ಚು ಅನುಕೂಲ, ಅವರ ಪಾಲಿನ ನೀರನ್ನು ಅವರಿಗೆ ಕೊಟ್ಟೆ ಕೊಡುತ್ತೇವೆ. ತಮಿಳುನಾಡು, ಕರ್ನಾಟಕದ ಜನರೆಲ್ಲರೂ ಭಾರತೀಯರು. ಹಾಗಾಗಿ ಯಾವಾಗ ಬೇಕಾದರೂ ಮಾತುಕತೆಗೆ ಸಿದ್ಧ… ಎಂದು ಹೇಳಿದರು.