ಆಪರೇಷನ್ ಶೆರಾವಲಿ ವೇಳೆ ನಡೆದ ದುರಂತ – ಯೋಧ ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ನಡೆಯುತ್ತಿರುವ ಉಗ್ರ ನಿಗ್ರಹ ಕಾರ್ಯಾಚರಣೆ ವೇಳೆ ಸೇನಾಧಿಕಾರಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಕಡಿದಾದ ಪರ್ವತದ ತುದಿಯಿಂದ ಜಾರಿ ಆಳವಾದ ಕಂದಕಕ್ಕೆ ಬಿದ್ದು ಸೇನಾಧಿಕಾರಿ ಬೀರೇಶ್ವರ್ ಗೊಸ್ವಾಮಿ ಅವರು ಮೃತಪಟ್ಟಿದ್ದಾರೆ.

ರಾಜೌರಿ ದುರ್ಗಮ ಕಾಡುಗಳಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ಅಡಗಿದ್ದರು. ಅವರನ್ನು ಪತ್ತೆಹಚ್ಚಲು ಕಳೆದ 15 ದಿನಗಳಿಂದ ನಡೆಯುತ್ತಿರುವ ಉಗ್ರರ ವಿರುದ್ಧದ ಜಂಟಿ ಕಾರ್ಯಾಚರಣೆ ವೇಳೆ ಈ ದುರಂತ ಸಂಭವಿಸಿದೆ.

ಜಮ್ಮು ಕಾಶ್ಮೀರ ಪೊಲೀಸ್‌ ಮತ್ತು ಅರೆಸೈನಿಕ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ಮುನ್ನಡೆಸುತ್ತಿದ್ದು, ಶನಿವಾರ ಸಂಜೆ ಡೋರಿಮಲ್‌ ಪ್ರದೇಶದ ಕಡಿದಾದ ಬಂಡೆಗಳು ಹಾಗೂ ದುರ್ಗಮ ಪರ್ವತಗಳ ನಡುವೆ ಕಾರ್ಯಾಚರಣೆಯಲ್ಲಿದ್ದಾಗ, ಹವಾಮಾನ ವೈಪರೀತ್ಯ ಹಾಗೂ ಅಪಾಯಕಾರಿ ಭೌಗೋಳಿಕ ಪರಿಸ್ಥಿತಿಯಿಂದಾಗಿ ಲೆಫ್ಟಿನೆಂಟ್ ಬೀರೇಶ್ವರ್ ಗೋಸ್ವಾಮಿ ಅವರು ಕಾಲು ಜಾರಿ ಕಮರಿಗೆ ಬಿದ್ದರು.

ತಕ್ಷಣ ಜೊತೆಯಲ್ಲಿದ್ದವರು ರಕ್ಷಣಾ ಕಾರ್ಯಾಚರಣೆ ನಡೆಸಿ, ಅವರನ್ನು ಹೊರತೆಗೆದರು. ಆದರೆ ಗಂಭೀರವಾಗಿ ಗಾಯಗೊಂಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಬೀರೇಶ್ವರ್ ಗೋಸ್ವಾಮಿ ಸಾವನ್ನಪ್ಪಿದ್ದಾರೆ.