ಕೋಟಿಗಟ್ಟಲೆ ಹಣ ವಂಚನೆ ಪ್ರಕರಣ: ತಂದೆ ಹಾಗೂ ಮಗಳನ್ನು ಬಂಧಿಸಿದ ಪೊಲೀಸರು

ಬೆಂಗಳೂರು ಜೂ 8 : ಸರಕಾರಿ ಉದ್ಯೋಗದ ಆಮಿಷವೊಡ್ಡಿ ನಿರುದ್ಯೋಗಿ ಯುವಕರಿಂದ ಕೋಟ್ಯಂತರ ರೂ. ವಸೂಲಿ ಮಾಡುತ್ತಿದ್ದ ತಂದೆ-ಮಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸರ್ಕಾರಿ ಉದ್ಯೋಗ ಕೊಡಿಸುವ ಹೆಸರಿನಲ್ಲಿ ನಕಲಿ ತರಬೇತಿ ಕೇಂದ್ರಗಳನ್ನು ನಡೆಸಿ, ನಕಲಿ ನೇಮಕಾತಿ ಪತ್ರಗಳ ಮೂಲಕ ಸುಮಾರು 5.30 ಕೋಟಿ ರೂ. ವಂಚಿಸಿದ್ದ ಶಂಶಾದ್ ಬೇಗಂ ಮತ್ತು ಮನ್ಸೂರ್ ಅಹಮದ್ ಬಂಧನವಾಗಿದೆ. ಕೆಲಸದ ಭರವಸೆ ನೀಡಿ ತರಬೇತಿ ಹೆಸರಿನಲ್ಲಿ ಹಣ ಪೀಕುತ್ತಿದ್ದ ಅಪ್ಪ-ಮಗಳ ಖತರ್ನಾಕ್ ಜಾಲಕ್ಕೆ ಬಲಿಯಾದ ಹಲವರು, ಕೆಲಸಕ್ಕೆಂದು ತೆರಳಿದಾಗ ಮೋಸ ಹೋಗಿರುವುದು ದೃಢಪಟ್ಟಿದೆ.

ಸಂತ್ರಸ್ತರಿಂದ ದೂರು ದಾಖಲಾದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರಿ ಕೆಲಸ ಕೊಡಿಸುವ ನೆಪದಲ್ಲಿ ಬರುವ ಮಧ್ಯವರ್ತಿಗಳ ನಂಬಿ ಹಣ ಕಳೆದುಕೊಳ್ಳಬೇಡಿ ಎಂದು ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ಎಚ್ಚರಿಸಿದೆ.