ಶಿಶುವಿನ ಅಕ್ರಮ ದತ್ತು ಹಾಗೂ ಕಳ್ಳಸಾಗಣೆ : ಐವರ ಬಂಧನ

​ಉಡುಪಿಯ ಕಾಮತ್ ನರ್ಸಿಂಗ್ ಹೋಮ್‌ನಲ್ಲಿ ನಡೆದ ಅಕ್ರಮ ದತ್ತು ಹಾಗೂ ಶಿಶು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವೈದ್ಯರು ಸೇರಿದಂತೆ ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಉಡುಪಿ ಬನ್ನಂಜೆಯ ನಿವಾಸಿ, ಉಡುಪಿ ಕಾಮತ್ ನರ್ಸಿಂಗ್ ಹೋಂ ನ ವೈದ್ಯ ಡಾ. ಕೆ. ಸುರೇಂದ್ರ ಕಾಮತ್ (76) ಮತ್ತು ಉಡುಪಿಯ ಮೂಡುತೋನ್ಸೆ ಗ್ರಾಮದ ನೇಜಾರು ಸಂತೆಕಟ್ಟೆಯ ರಾಜೀವ್ ನಗರದ ನಿವಾಸಿ ಎಸ್. ಪ್ರಕಾಶ್ (50) ಎಂದು ಗುರುತಿಸಲಾಗಿದೆ. ಸುಮಾರು 11 ವರ್ಷಗಳಿಂದ ಮಕ್ಕಳಿಲ್ಲದ ಪ್ರಕಾಶ್ ಮತ್ತು ಪೂರ್ಣಿಮಾ ಎಂಬ ದಂಪತಿಗಳು, ಮಗುವೊಂದನ್ನು ಅಕ್ರಮವಾಗಿ ದತ್ತು ಪಡೆದಿದ್ದರು.

​ತನಿಖೆಯ ಪ್ರಕಾರ, ವೈದ್ಯ ಡಾ. ಕೆ. ಸುರೇಂದ್ರ ಕಾಮತ್ ಅವರ ಸಹಾಯದಿಂದ ಈ ದಂಪತಿಗಳು ನವಜಾತ ಹೆಣ್ಣು ಶಿಶುವೊಂದನ್ನು ಅಕ್ರಮವಾಗಿ ಪಡೆದುಕೊಂಡಿದ್ದರು. ಇದಕ್ಕಾಗಿ ನಕಲಿ ಜನನ ಪ್ರಮಾಣಪತ್ರವನ್ನು ಸೃಷ್ಟಿಸಲಾಗಿತ್ತು. ಈ ಪ್ರಕರಣದಲ್ಲಿ ಶಿಶುವನ್ನು ಹಸ್ತಾಂತರಿಸಿದ ಆರೋಪದ ಮೇಲೆ ಸಂಪತ್ ಮತ್ತು ಸುಪ್ರೀತಿ ಎಂಬುವವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜೂನ್ 19ರಂದು ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾ ಕಚೇರಿಯ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು, ಈ ಅಕ್ರಮವನ್ನು ಪತ್ತೆಹಚ್ಚಿ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.